ಬೆಲೆ ಕುಸಿತದಿಂದ ಕಂಗೆಟ್ಟು ಚೆಂಡು ಹೂ ತೋಟ ನಾಶ ಮಾಡಿದ ರೈತ

ಚಿಕ್ಕಬಳ್ಳಾಪುರ: ಮಾರುಕಟ್ಟೆಯಲ್ಲಿ ಚೆಂಡು ಹೂ ಪ್ರತಿ ಕೆ.ಜಿಗೆ 5 ರಿಂದ 10 ರೂಪಾಯಿ ಗೆ ಬಿಕರಿಯಾಗುತ್ತಿದ್ದು, ಇದರಿಂದ ಬೇಸತ್ತ ರೈತ ಚೆಂಡು ಹೂವಿನ ತೋಟವನ್ನೇ ನಾಶ ಮಾಡಿದ್ದಾನೆ.

ಚಿಕ್ಕಬಳ್ಳಾಪುರ ತಾಲೂಕಿನ ಅಂಗರೇನಹಳ್ಳಿ ಗ್ರಾಮದ ರೈತ ರವಿಕುಮಾರ್ ಅವರು 4 ಎಕರೆ ಪ್ರದೇಶದಲ್ಲಿ ಚೆಂಡು ಹೂ ಬೆಳೆದಿದ್ದರು. ಹೂಗಳು ಸಹ ಬಹಳ ಸೊಂಪಾಗಿ ಬೆಳೆದಿದ್ದವು. ಆದರೆ ಹೂ ಕಟಾವು ಮಾಡಿ ಮಾರುಕಟ್ಟೆಗೆ ತಂದರೆ ಪ್ರತಿ ಕೆ.ಜಿಗೆ 05 ರೂಪಾಯಿಗೆ ಬಿಕರಿಯಾಗಿದೆ. ಇದರಿಂದ ರೋಸಿಹೋದ ರೈತ ರವಿಕುಮಾರ್ ಅವರು ಟ್ರ್ಯಾಕ್ಟರ್ ಮೂಲಕ ಇಡೀ ತೋಟವನ್ನು ಉಳುಮೆ ಮಾಡಿ ಸಂಪೂರ್ಣ ನಾಶ ಮಾಡಿದ್ದಾರೆ.

ಒಟ್ಟು 4 ಎಕೆರೆಗೆ 4 ಲಕ್ಷ ಬಂಡವಾಳ ಹಾಕಿ ಚೆಂಡು ಹೂವು ಬೆಳೆದಿದ್ದು, ಕೇವಲ 40 ರಿಂದ 50 ಸಾವಿರ ಆದಾಯ ಸಿಕ್ಕಿದೆ. ಇದರಿಂದ ಹೂವು ಕಟಾವು ಮಾಡುವ ಕೂಲಿ ಕಾರ್ಮಿಕರಿಗೆ ನೀಡುವಷ್ಟು ಸಹ ಹಣ ಸಿಗಲ್ಲ. ಅಲ್ಲದೆ ಮುಂದೆ ಬೆಳೆ ಕಾಪಾಡಿಕೊಳ್ಳಲು ಕ್ರೀಮಿನಾಶಕಗಳನ್ನು ಸಿಂಪಡಿಸಲು ಹಣ ಹೆಚ್ಚು ಬೇಕಾಗುತ್ತದೆ. ಹೀಗಾಗಿ ತೋಟ ನಾಶ ಮಾಡುತ್ತಿರುವುದಾಗಿ ರವಿಕುಮಾರ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *