ಬೆಟ್ಟಕ್ಕೆ ಬೆಂಕಿ – ಹೆದರಿ ಗ್ರಾಮಕ್ಕೆ ಬಂದ ಚಿರತೆ

ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಹಲವು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಅರಣ್ಯದಲ್ಲಿದ್ದ ಚಿರತೆ, ಬೆಂಕಿಗೆ ಹೆದರಿ ಗ್ರಾಮವನ್ನು ಸೇರಿದ ಘಟನೆ ನಡೆದಿದೆ.

ಶುಕ್ರವಾರ ರಾತ್ರಿ 9.30ರ ಸಮಯದಲ್ಲಿ ಬೆಟ್ಟಕ್ಕೆ ಬೆಂಕಿ ಇಟ್ಟಿರುವುದು ತಿಳಿದು ಬಂದಿದೆ. ಬೆಂಕಿಯ ಕೆನ್ನಾಲಿಗೆ ತೀವ್ರವಾಗಿದ್ದ ಕಾರಣ ಹಾಗೂ ಬೆಟ್ಟದಲ್ಲಿನ ಹುಲ್ಲು ಒಣಗಿರುವ ಕಾರಣ ತ್ವರಿತಗತಿಯಲ್ಲಿ ಬೆಂಕಿ ಇಡೀ ಬೆಟ್ಟ ವ್ಯಾಪಿಸಿದೆ ಎನ್ನಲಾಗುತ್ತಿದೆ. ಕಿಡಿಗೇಡಿಗಳ ಕೃತ್ಯದಿಂದ ಮರ ಗಿಡಗಳು ಬೆಂಕಿಗಾಹುತಿಯಾಗಿವೆ. ಬೆಟ್ಟಕ್ಕೆ ಬೆಂಕಿ ಬಿದ್ದಿರುವ ಹಿನ್ನೆಲೆ ಚಿರತೆ ಬೆಂಕಿಗೆ ಹೆದರಿ ಮಾಕಳಿ ಗ್ರಾಮದ ಬಳಿ ಬೀಡು ಬಿಟ್ಟಿದೆ.

ಶುಕ್ರವಾರ ರಾತ್ರಿ 9.45ರ ಸಮಯದಲ್ಲಿ ಗ್ರಾಮಕ್ಕೆ ನುಗ್ಗಿ ಮೂರು ಕೋಳಿಗಳನ್ನು ಹೊತ್ತೊಯ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ರಾತ್ರಿಯಿಡಿ ಪಟಾಕಿ ಹೊಡೆದು, ತಮಟೆ ಸದ್ದು ಮಾಡುತ್ತಾ ಚಿರತೆ ಗ್ರಾಮಕ್ಕೆ ಬರದಂತೆ ಗ್ರಾಮಸ್ಥರು ಕಾವಲು ಕಾದಿದ್ದಾರೆ. ಇಂದು ಚಿರತೆ ಬಂಧನಕ್ಕೆ ಕ್ರಮಕೈಗೊಳ್ಳಲು ಮಾಕಳಿ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲು ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *