ಬೆಂಗ್ಳೂರಲ್ಲಿ ವೀಕೆಂಡ್ 2 ದಿನ ಲಾಕ್‍ಡೌನ್- ಅಶ್ವಥ್ ನಾರಾಯಣ್ ಸುಳಿವು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮುಂದಿನ ವಾರದಿಂದ ಶನಿವಾರ ಹಾಗೂ ಭಾನುವಾರ ಲಾಕ್ ಡೌನ್ ಮಾಡುವ ಬಗ್ಗೆ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಸುಳಿವು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಕೇಸ್‍ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಶನಿವಾರ ಕೂಡ ಲಾಕ್ ಡೌನ್ ಮಾಡಬೇಕೋ ಬೇಡವೋ ಎಂದು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ಲಾಕ್ ಡೌನ್ ಅವಶ್ಯಕತೆ ಜನರ ಸುರಕ್ಷತಾ ದೃಷ್ಟಿಯಿಂದ ಒಳ್ಳೆಯದು. ಆದರೆ ಲಾಕ್‍ಡೌನ್‍ನಿಂದ ವೈರಸ್ ಹರಡುವುದನ್ನು ಮುಂದೂಡಬಹುದೇ ಹೊರತು ತಡೆಯಲು ಸಾಧ್ಯವಿಲ್ಲ. ಲಾಕ್‍ಡೌನ್ ಬಗ್ಗೆ ಇಲ್ಲಿಯ ತನಕ ನಮಗೆ ಒಲವು ಇಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದು ಹೇಳುವ ಮೂಲಕ ಅನಿವಾರ್ಯ ಪರಿಸ್ಥಿತಿ ಬಂದರೆ ಶನಿವಾರ ಲಾಕ್ ಡೌನ್ ಮಾಡ್ತೀವಿ ಎಂದು ಡಿಸಿಎಂ ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಪಿಪಿಇ ಕಿಟ್ ಬೆಲೆ ಮಾರ್ಕೆಟ್ ನಲ್ಲಿ ಹೆಚ್ಚು ಇತ್ತು. ದಿನ ಕಳೆದಂತೆ ಅದರ ಬೆಲೆ ಕಡಿಮೆ ಆಗಿದೆ. ಇದರಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಈ ಸಂದರ್ಭದಲ್ಲಿ ಸರ್ಕಾರದ ಜೊತೆ ನಿಲ್ಲುವುದು ಬಿಟ್ಟು ಇಂತಹ ಆರೋಪ ಮಾಡಬಾರದು. ಕೋವಿಡ್ ಉಪಕರಣಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಆರೋಪ ಮಾಡುವ ಮೂಲಕ ರಾಜಕೀಯ ಮಾಡಬಾರದು. ಜನರ ತೆರಿಗೆ ಹಣ ಯಾವುದೇ ಕಾರಣಕ್ಕೂ ಪೋಲಾಗುವುದಿಲ್ಲ ಎಂದು ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು.

Comments

Leave a Reply

Your email address will not be published. Required fields are marked *