ಬೆಂಗ್ಳೂರಲ್ಲಿ ರಸ್ತೆ ಬದಿ ಮಳೆಯಲ್ಲಿ ನೆನೆದ ಸೋಂಕಿತನ ಶವ!

– ಅನಾಥವಾದ ವ್ಯಕ್ತಿಯ ಡೆಡ್‍ಬಾಡಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ತನ್ನ ರೌದ್ರ ನರ್ತನವನ್ನು ತೋರಿಸುತ್ತಿದ್ದು, ಕೆಲವರು ಆಸ್ಪತ್ರೆಗಳಿಗೆ ಅಲೆದಾಡಿ ಅಲೆದಾಡಿ ಬೆಡ್ ಸಿಗದೇ ಮೃತಪಟ್ಟಿದ್ದಾರೆ. ಈ ಮಧ್ಯೆ ನಗರದ ರಸ್ತೆ ಬದಿಯಲ್ಲೇ ಸೋಂಕಿತನ ಶವವೊಂದು ಅನಾಥವಾಗಿ ಬಿದ್ದಿರುವುದು ಬೆಳಕಿಗೆ ಬಂದಿದೆ.

ಹೌದು. ಬೆಂಗಳೂರಿನ ಹನುಮಂತನಗರದ ಸೋಂಕಿತ ವ್ಯಕ್ತಿಯ ಸಾವಿನ ಕರುಣಾಜನಕ ಕಥೆ ಇದಾಗಿದೆ. ಮನೆಯ ಮುಂದಿನ ರಸ್ತೆಯಲ್ಲೇ ಸುಮಾರು 4 ಗಂಟೆಗಳ ಕಾಲ ಶವ ಅನಾಥವಾಗಿ ಬಿದ್ದಿತ್ತು.

ವ್ಯಕ್ತಿ ಹುಷಾರಿಲ್ಲ ಎಂದು ಸೋಮವಾರ ಆಸ್ಪತ್ರೆಗೆ ಹೋಗಿದ್ದ. ನಿನ್ನೆ ಮಧ್ಯಾಹ್ನ ಸೋಂಕು ಇದೆ ಎಂಬ ಫೋನ್ ಬಂತು. ಅಲ್ಲದೆ ಮನೆಯಲ್ಲೇ ಇರಿ, ಅಂಬುಲೆನ್ಸ್ ಬರುತ್ತೆ ಎಂದು ಫೋನ್ ನಲ್ಲಿ ಹೇಳಲಾಗಿತ್ತು. ಸೋಂಕು ಇದೆ ಎಂಬ ವಿಷಯ ತಿಳಿದು ವ್ಯಕ್ತಿ ಅಲ್ಲಿಯೇ ಕುಸಿದು ಹೋಗಿದ್ದಾನೆ.

ನನಗೆ ಸೋಂಕು ಇದೆ ಎಂದು ಎಲ್ಲರಿಗೂ ಗೊತ್ತಾಗಿ ಬಿಡುತ್ತೆ ಎಂಬ ಭಯ ಉಂಟಾಗಿ ಮನೆಯಿಂದ ಹೊರಬಂದ ವ್ಯಕ್ತಿಗೆ ರಸ್ತೆಯಲ್ಲೇ ಹೃದಯಾಘಾತವಾಗಿದೆ. ಹೀಗಾಗಿ ಸೋಂಕಿತ ಮನೆ ಎದುರಿನ ನಡು ರಸ್ತೆಯಲ್ಲೇ ಕುಸಿದು ಪ್ರಾಣಬಿಟ್ಟಿದ್ದಾನೆ. ವಿಪರ್ಯಾಸವೆಂದರೆ ವ್ಯಕ್ತಿಯ ಶವ ಮಧ್ಯಾಹ್ನದಿಂದ ಸಂಜೆವರೆಗೂ ನಡು ರಸ್ತೆಯಲ್ಲೇ ಇತ್ತು. ನಿನ್ನೆ ಸಂಜೆ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ಈ ಮಳೆಯಲ್ಲೂ ಶವ ಮಾತ್ರ ನಡು ರಸ್ತೆಯಲ್ಲೇ ಇತ್ತು.

ಕೊನೆಗೆ ಸ್ಥಳೀಯರು ರಸ್ತೆಯಲ್ಲಿದ್ದ ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಬಳಿಕ ಅಂಬುಲೆನ್ಸ್‍ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಶವ ರವಾನೆ ಮಾಡಲಾಗಿದೆ.

Comments

Leave a Reply

Your email address will not be published. Required fields are marked *