ಬೆಂಗ್ಳೂರಲ್ಲಿ ಮೂರನೇ ದಿನವೂ ರೈತರ ರಣಕಹಳೆ – ವಿಧಾನಸೌಧಕ್ಕೆ ಮುತ್ತಿಗೆ, ರಾಜಭವನಕ್ಕೆ ಬೃಹತ್ ರ‌್ಯಾಲಿ

ಬೆಂಗಳೂರು: ರೈತ ವಿರೋಧಿ ಕಾನೂನು ಖಂಡಿಸಿ ಬೆಂಗಳೂರಲ್ಲಿ ರೈತರು ನಡೆಸ್ತಿರುವ ಪ್ರತಿಭಟನೆಗೆ ಇಂದು ಮೂರನೇ ದಿನ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ 10 ಸಾವಿರಕ್ಕೂ ಹೆಚ್ಚು ರೈತರು ಇಂದು ಮತ್ತೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ.

ನಿನ್ನೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದ ರೈತರನ್ನು ಪೊಲೀಸರು ಫ್ರೀಡಂ ಪಾರ್ಕ್ ಬಳಿಯೇ ತಡೆದಿದ್ದರು. ಮೆಜೆಸ್ಟಿಕ್‍ನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 11 ಗಂಟೆಗೆ ರೈತರು ಇವತ್ತೂ ಬೃಹತ್ ಮೆರವಣಿಗೆ ಕೈಗೊಳ್ಳಲಿದ್ದಾರೆ. ಆನಂದ್‍ರಾವ್ ಸರ್ಕಲ್, ಫ್ರೀಡಂ ಪಾರ್ಕ್, ಕೆ ಆರ್ ಸರ್ಕಲ್ ಮಾರ್ಗವಾಗಿ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ.

ಇತ್ತ ಮತ್ತೋರ್ವ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿಯೂ ಬೆಂಗಳೂರಲ್ಲಿ ಮೂರನೇ ದಿನ ಬೃಹತ್ ಪ್ರತಿಭಟನೆಗೆ ನಿರ್ಧರಿಸಿದೆ. ರೈತ ವಿರೋಧಿ ಕಾನೂನು ವಿರೋಧಿಸಿ ರಾಜಭವನಕ್ಕೆ ಮುತ್ತಿಗೆ ಹಾಕಲಿದ್ದಾರೆ.

ಈ ರ್ಯಾಲಿಯೂ ಬೆಳಗ್ಗೆ 11 ಗಂಟೆಗೆ ಮೆಜೆಸ್ಟಿಕ್‍ನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಆರಂಭವಾಗಿ ಆನಂದ್‍ರಾವ್ ಸರ್ಕಲ್ ಮೂಲಕ ಫ್ರೀಡಂ ಪಾರ್ಕ್ ಮೂಲಕ ರಾಜಭವನಕ್ಕೆ ತೆರಳಲಿದೆ. ರಾಜಭವನ ಮುತ್ತಿಗೆ ಹಾಕುವ ಸಲುವಾಗಿ ವಿವಿಧ ಜಿಲ್ಲೆಗಳಿಂದ ಇನ್ನಷ್ಟು ರೈತರು ಇವತ್ತು ಬೆಂಗಳೂರಿಗೆ ಬರುತ್ತಿದ್ದಾರೆ.

Comments

Leave a Reply

Your email address will not be published. Required fields are marked *