ಬೆಂಗ್ಳೂರಲ್ಲಿ ನಡೆದಿದ್ದು ಅತೃಪ್ತರ ಸಭೆ ಅಲ್ಲ: ಎಸ್.ಟಿ ಸೋಮಶೇಖರ್

– ಡಿಕೆಶಿ ವಿರುದ್ಧ ಎಸ್‍ಟಿಎಸ್ ಗುಡುಗು

ಮೈಸೂರು: ಮೊನ್ನೆ ಬೆಂಗಳೂರಿನಲ್ಲಿ ನಡೆದಿರುವ ಬಿಜೆಪಿ ಶಾಸಕರ ಸಭೆ ಅತೃಪ್ತರ ಸಭೆ ಅಲ್ಲ. ಶಾಸಕ ಉಮೇಶ್ ಕತ್ತಿ ತಮ್ಮ ಸಹೋದರನಿಗೆ ರಾಜ್ಯಸಭಾ ಟಿಕೆಟ್ ಕೊಡಿಸಲು ಶಾಸಕರ ಒಟ್ಟಾಗಿ ಸೇರಿಸಿದ್ದಾರೆ ಅಷ್ಟೆ. ಈ ಸಭೆ ಸಿಎಂ ವಿರುದ್ಧ ಅಲ್ಲ ಎಂದು ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ತಮ್ಮವರ ವಿಧಾನಪರಿಷತ್ ನೇಮಕ ಹಾಗೂ ರಾಜ್ಯಸಭೆ ಟಿಕೆಟ್‍ಗಾಗಿ ಒತ್ತಡ ಹೇರಲು ನಡೆದಿರುವ ಸಭೆ ಇದು. ಈ ವಿಚಾರ ಬಿಟ್ಟು ಬೇರೆ ಯಾವ ವಿಚಾರವೂ ಅಲ್ಲಿ ಚರ್ಚೆ ಆಗಿಲ್ಲ ಎಂದರು. ಎಚ್. ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್ ಹಾಗೂ ಶಂಕರ್ ಮೂವರಿಗೂ ವಿಧಾನ ಪರಿಷತ್ ನೇಮಕ ಮಾಡಬೇಕು. ಈ ಬಗ್ಗೆ ಸಿಎಂಗೆ ಹೇಳಿದ್ದೇವೆ. ನಾವೆಲ್ಲ ಶಾಸಕರು ಈ ಮೂವರ ಪರ ಇದ್ದೇವೆ ಎಂದು ಸ್ಪಷ್ಟಪಡಿಸಿದರು.

ಆಪರೇಷನ್ ಕಾಂಗ್ರೆಸ್ ವಿಚಾರದ ಬಗ್ಗೆಯೂ ಸಚಿವರು ಪ್ರತಿಕ್ರಿಯಿಸಿ, ಡಿ.ಕೆ. ಶಿವಕುಮಾರ್ ಇನ್ನೂ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರವೇ ಸ್ವೀಕರಿಸಿಲ್ಲ. ಮೊದಲು ಅವರ ಪಕ್ಷದ ಪದಾಧಿಕಾರಿಗಳ ನೇಮಕ ಮಾಡಿಕೊಳ್ಳಲಿ. ಆಮೇಲೆ ಉಳಿದದ್ದು ನೋಡಲಿ. ಬಿಜೆಪಿಯಲ್ಲಿ ಅತೃಪ್ತರು, ಅಸಮಾಧಾನಿತರು ಎಂಬುದಿಲ್ಲ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *