ಬೆಂಗ್ಳೂರಲ್ಲಿ ಕೊರೊನಾ ಅಟ್ಟಹಾಸ- ಎಎಸ್‍ಐ ಸೇರಿ ಮೂವರು ಸೋಂಕಿಗೆ ಬಲಿ

– 15 ದಿನಗಳಲ್ಲಿ ನಿವೃತ್ತಿ ಆಗಬೇಕಿದ್ದ ಎಎಸ್‍ಐ ಸಾವು

ಬೆಂಗಳೂರು: ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಎಎಸ್‍ಐ ಸೇರಿ ಮೂವರು ಹೆಮ್ಮಾರಿಗೆ ಬಲಿಯಾಗಿದ್ದಾರೆ.

64 ವರ್ಷದ ವೃದ್ಧ ಮತ್ತು 74 ವರ್ಷದ ವೃದ್ಧ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾದೆ ಇಂದು ಮೃತಪಟ್ಟಿದ್ದಾರೆ. 64 ವರ್ಷದ ವೃದ್ಧ ಖಾಸಗಿ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್ ಆಗಿದ್ದು, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಇವರಿಗೆ ಕೊರೊನಾ ಸೊಂಕು ಬಂದಿದೆ. ಹೀಗಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಾದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ವೃದ್ಧ ಸಾವನ್ನಪ್ಪಿದ್ದಾರೆ.

74 ವರ್ಷದ ವೃದ್ಧ ಇದೇ ತಿಂಗಳು 6 ರಂದು ವಿಕ್ಟೋರಿಯಾಗೆ ದಾಖಲಾಗಿದ್ದರು. ಕೋವಿಡ್-19 ಪಾಸಿಟಿವ್ ಬಂದ ಮೇಲೆ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನೂ ಕೊರೊನಾ ಮಹಾಮಾರಿಗೆ ಎಎಸ್‍ಐ ಸಾನ್ನಪ್ಪಿದ್ದಾರೆ.

ಎಎಸ್‍ಐ ವಿವಿ ಪುರಂ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಂಟೈನ್ಮೆಟ್ ಝೋನ್‍ಗಳಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಕಳೆದ ಮೂರು ದಿನದಿಂದ ನೆಗಡಿ, ಶೀತದಿಂದ ಬಳಲುತ್ತಿದ್ದರು. ಭಾನುವಾರ ಸಂಜೆ ಥಣಿಸಂದ್ರದ ಮನೆಗೆ ಹೋಗಿದ್ದಾರೆ. ಅಲ್ಲಿ ಎಎಸ್‍ಐಗೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ.

ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಎಎಸ್‍ಐ ಭಾನುವಾರ ಸಂಜೆ ಮೃತಪಟ್ಟಿದ್ದಾರೆ. ಸಾವನ್ನಪ್ಪಿದ ಬಳಿಕ ಕೊರೊನಾ ಟೆಸ್ಟ್ ಮಾಡಲಾಗಿತ್ತು.  ಟೆಸ್ಟ್ ನಲ್ಲಿ ಕೊರೊನಾ ಇರೋದು ದೃಢವಾಗಿದೆ. ಪಿಎಸ್‍ಐಗೆ ಇನ್ನೂ 15 ದಿನಗಳಲ್ಲಿ ನಿವೃತ್ತಿ ಇತ್ತು. ಇದೇ ತಿಂಗಳ 30ರಂದು ಎಎಸ್‍ಐ ನಿವೃತ್ತಿಯಾಗಬೇಕಿತ್ತು.

ವಿವಿ ಪುರಂ ಠಾಣೆಯ ಮತ್ತೊಬ್ಬ ಎಎಸ್‍ಐಗೂ ಪಾಸಿಟಿವ್ ಬಂದಿದೆ. ಇವರು ಸಾವನ್ನಪ್ಪಿದ ಎಎಸ್‍ಐ ಜೊತೆ ಕೆಲಸ ಮಾಡುತ್ತಿದ್ದರು. ಹೀಗಾಗಿ ಇವರಿಗೂ ಕೊರೊನಾ ಸೋಂಕು ಬಂದಿದೆ. ಸದ್ಯಕ್ಕೆ ಇಡೀ ವಿವಿ ಪುರಂ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ.

Comments

Leave a Reply

Your email address will not be published. Required fields are marked *