ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಅರೆಸ್ಟ್

– ಕೇರಳದಲ್ಲಿ ಎಟಿಎಸ್‍ನಿಂದ ಬಂಧನ

ಬೆಂಗಳೂರು: ಸಿಲಿಕಾನ್ ಸಿಟಿಯನ್ನು ತಲ್ಲಣಗೊಳಿಸಿದ್ದ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯನ್ನು ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಶೋಯೆಬ್ ಬಂಧಿತ ಆರೋಪಿಯಾಗಿದ್ದು, ಎಟಿಎಸ್ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. 2008ರಿಂದ ಆರೋಪಿ ತಲೆಮರೆಸಿಕೊಂಡಿದ್ದ. ಆದರೆ ಪೊಲೀಸರು ಮಾತ್ರ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳ ಹುಡುಕಾಟದಲ್ಲೇ ತೊಡಗಿದ್ದರು. ಹೀಗೆ ತನಿಖೆ ನಡೆಸುವಾಗ ಕೇರಳದಲ್ಲಿರುವುದು ಪತ್ತೆಯಾಗಿದ್ದು, ಹೊಂಚು ಹಾಕಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಮೂಲಕ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿದಂತಾಗಿದೆ.

ಪ್ರಕರಣದ ಬಹುತೇಕ ಆರೋಪಿಗಳು ಕೇರಳದಲ್ಲೇ ತಲೆ ಮರೆಸಿಕೊಂಡಿದ್ದು, ಎಟಿಎಸ್ ಪೊಲೀಸರು ಎಷ್ಟೇ ಹುಡುಕಿದರೂ ಪ್ರಮುಖ ಆರೋಪಿ ಶೋಯೆಬ್ ಸಿಕ್ಕಿರಲಿಲ್ಲ. ಈ ಹಿಂದೆ ಆರೋಪಿ ಸಲೀಂನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈತ ಸಹ ಕೇರಳದಲ್ಲಿಯೇ ತಲೆಮರೆಸಿಕೊಂಡಿದ್ದ. 2018ರಲ್ಲಿ ಸಲೀಂನನ್ನು ಬಂಧಿಸಲಾಗಿತ್ತು. ಬಳಿಕ ಪ್ರಮುಖ ಆರೋಪಿಗಾಗಿ ಬಲೆ ಬೀಸಲಾಗಿತ್ತು.

2008ರ ಜುಲೈ 25ರಂದು ಮಡಿವಾಳ ಸೇರಿದಂತೆ ಒಟ್ಟು ಒಂಬತ್ತು ಕಡೆ ಬಾಂಬ್ ಸ್ಫೋಟಗಳು ನಡೆದಿದ್ದವು. ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರು. 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಅದೇ ವರ್ಷ ಜೈಪುರ ಮತ್ತು ಅಹಮದಾಬಾದ್‍ಗಳಲ್ಲಿಯೂ ಸರಣಿ ಸ್ಫೋಟ ಸಂಭವಿಸಿದ್ದವು. ಈ ಸ್ಫೋಟದ ಪ್ರಮುಖ ಸಂಚುಕೋರ ಈತನೇ ಎಂದು ಶಂಕಿಸಲಾಗಿದೆ.

Comments

Leave a Reply

Your email address will not be published. Required fields are marked *