ಬೆಂಗಳೂರು ಗಲಭೆ ಬಗ್ಗೆ ಅಮಿತ್ ಶಾ ಜೊತೆ ಚರ್ಚಿಸಿದ್ದೇನೆ: ತೇಜಸ್ವಿಸೂರ್ಯ

– ಎನ್‍ಐಎ ಶಾಶ್ವತ ಕಚೇರಿ ಸ್ಥಾಪಿಸಲು ನಿರ್ಧಾರ
– ಬೆಂಗಳೂರನ್ನು ಸುರಕ್ಷಿತವಾಗಿಡಲು ಅಗತ್ಯ ಕ್ರಮ

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಾತನಾಡಿದ್ದೇನೆ ಎಂದು ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿಸೂರ್ಯ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೇನೆ. ಬೆಂಗಳೂರಿನ ಗಲಭೆಯ ಬಗ್ಗೆ ವಿವರಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರನ್ನು ಸುರಕ್ಷಿತವಾಗಿಡುವುದು ಅಗತ್ಯವಾಗಿದೆ. ಹೀಗಾಗಿ ನಗರದಲ್ಲಿ ಎನ್‍ಐಎ ಕಚೇರಿ ಸ್ಥಾಪಿಸಲು ಮನವಿ ಮಾಡಿದ್ದೇನೆ. ಎನ್‍ಐಎ ಶಾಶ್ವತ ಕಚೇರಿ ಸ್ಥಾಪಿಸಲು ಅಮಿತ್ ಶಾ ಒಪ್ಪಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.

ಬೆಂಗಳೂರಿನಲ್ಲಿ ಎನ್‍ಐಎ ಕಚೇರಿ ಸ್ಥಾಪಿಸಲು ಬಿಜೆಪಿ ನಿರ್ಧರಿಸಿದೆ. ಕರ್ನಾಟಕ, ಕೇರಳ, ತಮಿಳುನಾಡು ಅಂಧ್ರ ಪ್ರದೇಶ ಭಾಗದಲ್ಲಿ ಏನೇ ಉಗ್ರ ಚಟುವಟಿಕೆಗಳಾದರೂ ಬೆಂಗಳೂರಿನಲ್ಲಿರುವ ಎನ್‍ಐಎನ ಸ್ಟೇಷನ್ ಹೌಸ್ ನಿಭಾಯಿಸುತ್ತದೆ. ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ನಡೆದ ಗಲಾಟೆ ಸಂದರ್ಭದಲ್ಲಿ ಎಫ್‍ಐಆರ್ ದಾಖಲಿಸಬೇಕೆಂದರೂ ಆಗುತ್ತಿರಲಿಲ್ಲ. ಆದರೆ ಈಗ ಎನ್‍ಐಎ ಸ್ಟೇಷನ್ ಹೌಸ್ ನಿರ್ಮಾಣವಾಗುತ್ತಿರುವುದರಿಂದ ರಾಜ್ಯದಲ್ಲಿ ಏನೇ ಆದರೂ ನಿಭಾಯಿಸಲು ಸುಲಭವಾಗುತ್ತದೆ ಎಂದರು. ಜೆಪಿ ನಡ್ಡಾ ಅವರು ಬಿಜೆಪಿ ಯುವ ಮೋರ್ಚಾದ ರಾಷ್ಟ್ರಿಯ ಅಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿದ್ದು, ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

Comments

Leave a Reply

Your email address will not be published. Required fields are marked *