ಬೆಂಗಳೂರಲ್ಲಿ ವಿವಾಹಿತೆಗೆ ಬಲವಂತವಾಗಿ ವಿಷ ಕುಡಿಸಿ ಹತ್ಯೆಗೆ ಯತ್ನ!

– ಪೊಲೀಸರ ಮೇಲೆ ಗಂಭೀರ ಆರೋಪ

ಬೆಂಗಳೂರು: ಸಿಲಿಕಾನ್ ಸಿಟಿಯ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಮ್ಮನ ಪಾಳ್ಯದಲ್ಲಿ ವಿವಾಹಿತೆಗೆ ಬಲವಂತವಾಗಿ ವಿಷ ಕುಡಿಸಿ ಹತ್ಯೆ ಮಾಡಲು ಯತ್ನಿಸಿದ ಆರೋಪವೊಂದು ಕೇಳಿ ಬಂದಿದೆ.

ಪಾವನ ಸಂತ್ರಸ್ತೆ. ಈಕೆಯನ್ನು ಪತಿ ಪ್ರದೀಪ್, ತಂದೆ- ತಾಯಿ ಹಾಗೂ ನಾದಿನಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಪಾವನಗೆ ಕಿರುಕುಳ ನೀಡಿದ್ದಾರೆ. ಗಂಡನ ಮನೆಯವರು ಹಲ್ಲೆ ಮಾಡಿ ವಿಷ ಕುಡಿಸಿದ್ದಾರೆ ಅಂತ ಪಾವನ ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ.

ಕಳೆದ ಆರು ತಿಂಗಳ ಹಿಂದೆ ಪಾವನ ಹಾಗೂ ಪ್ರದೀಪ್ ಎಂಬವರ ವಿವಾಹವಾಗಿತ್ತು. ಪಾವನ ಬೆಂಗಳೂರಿನ ಕೆಂಪೇಗೌಡ ಕಾಲೇಜಿನಲ್ಲಿ ನರ್ಸಿಂಗ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಪತಿ ಪ್ರದೀಪ್ ಫ್ಯಾಮಿಲಿ ಕೋರ್ಟ್ ನಲ್ಲಿ ಶಿರಸ್ತೆದಾರ್ ಆಗಿದ್ದಾನೆ. ಈ ಹಿಂದೆ ಹಲವು ಬಾರಿ ಗಂಡ-ಹೆಂಡತಿ ಮಧ್ಯೆ ಜಗಳವಾಗಿತ್ತು. ಹೀಗಾಗಿ ಪಾವನ ತವರು ಮನೆ ಸೇರಿದ್ದರು. ಆದರೆ 15 ದಿನಗಳ ಒಳಗಾಗಿ ಮನೆಗೆ ವಾಪಸ್ ಬರಬೇಕು ಅಂತ ಪತ್ನಿಗೆ ಪ್ರದೀಪ್ ನೋಟಿಸ್ ಕಳಿಸಿದ್ದ. ನಿನ್ನೆ ಪತ್ನಿಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದಾರೆ. ಪತಿಯ ಕರೆಯಂತೆ ನಿನ್ನೆ ಸಂಜೆ ಮರಿಯಮ್ಮನಪಾಳ್ಯದ ಪತಿ ಮನೆಗೆ ಪಾವನ ತೆರಳಿದ್ದರು. ಈ ವೇಳೆ ಪಾವನರಿಗೆ ಹಲ್ಲೆ ಮಾಡಿ ಬಲವಂತವಾಗಿ ವಿಷ ಕುಡಿಸಿದ್ದಾರೆ ಅಂತ ಪಾವನ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಸದ್ಯ ಪಾವನರ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಹಣ ಪಡೆದು ಪ್ರದೀಪ್ ನನ್ನು ಪೊಲೀಸರು ಬಿಟ್ಟು ಕಳಿಸಿರುವ ಆರೋಪ ಕೂಡ ಕೇಳಿ ಬಂದಿದೆ. ಸದ್ಯ ಆರೋಪಿ ಪ್ರದೀಪ್ ತಲೆಮರೆಸಿಕೊಂಡಿದ್ದಾನೆ.

Comments

Leave a Reply

Your email address will not be published. Required fields are marked *