ಬೆಂಕಿ ಹಚ್ಚಿ ಒಂದೇ ಕುಟುಂಬದ ಮೂವರ ಕೊಲೆ

-ಕೊಲೆಗೈದು, ಶವಗಳಿಗೆ ಬೆಂಕಿ ಹಚ್ಚಿರೋ ಶಂಕೆ

ಲಕ್ನೋ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಒಂದೇ ಕುಟುಂಬದ ಮೂವರ ಶವ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಆಗ್ರಾದ ನಾಗ್ಲಾ ಕಿಶನ್‍ಲಾಲ್ ಇಲಾಖೆಯಲ್ಲಿ ನಡೆದಿದೆ. ಪತಿ, ಪತ್ನಿ ಮತ್ತು ಮಗ ಮೂವರ ಶವಗಳು ಮನೆಯಲ್ಲಿ ದೊರೆತಿವೆ.

ರಘುವೀರ್ (55), ಮೀರಾ ಮತ್ತು ಬಬ್ಲೂ (22) ಮೃತ ಕುಟುಂಬಸ್ಥರು. ರಘುವೀರ್ ದಿನಸಿ ಅಂಗಡಿ ನಡೆಸುತ್ತಿದ್ದರು. ಭಾನುವಾರ ಸಂಜೆ ರಘುವೀರ್ ಸಂಬಂಧಿಕರ ಊರಿನಿಂದ ಹಿಂದಿರುಗಿದ್ದರು. ಇಂದು ಬೆಳಗ್ಗೆ ಮನೆ ಬಾಗಿಲು ಹಾಕಿದ್ದರಿಂದ ನೆರೆಹೊರೆಯವರು ಕಿಟಕಿಯಲ್ಲಿ ಇಣುಕಿ ನೋಡಿದಾಗ ಮೂವರ ಶವಗಳ ಕಂಡಿವೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೂರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇದೊಂದು ಕೊಲೆ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.

ಬೆಳಗ್ಗೆ ಹಾಲಿನ ವ್ಯಕ್ತಿ ಬಂದ್ರೂ ಯಾರು ಬಾಗಿಲು ತೆರೆದಿಲ್ಲ. ಬಬ್ಲೂ ಪ್ರತಿನಿತ್ಯ ಬೆಳಗ್ಗೆ 5 ಗಂಟೆಯ ಆಸುಪಾಸಿನಲ್ಲಿ ಅಂಗಡಿ ತೆರೆಯುತ್ತಿದ್ದ. ಆದ್ರೆ ಇಂದು ಅಂಗಡಿ ತೆರೆದಿರಲಿಲ್ಲ. ಕಿಟಕಿಯಲ್ಲಿ ನೋಡಿದಾಗ ರಘುವೀರ್ ಕುತ್ತಿಗೆಯಲ್ಲಿ ಹಗ್ಗವಿತ್ತು. ಇತ್ತ ಮೀರಾ ಮತ್ತು ಬಬ್ಲೂ ಕೈಗಳನ್ನು ಕಟ್ಟಲಾಗಿತ್ತು. ಒಂದು ವೇಳೆ ಬೆಂಕಿ ಹಚ್ಚಿಕೊಂಡಿದ್ದರೆ ಅವರ ಚೀರಾಟ ನಮಗೆ ಕೇಳಿಸಬೇಕಿತ್ತು. ಆದ್ರೆ ನಮಗೆ ಯಾವ ಧ್ವನಿಯೂ ಕೇಳಿಸಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *