ಬಿಹಾರದಲ್ಲೂ ಮಹಾಘಟಬಂಧನ್- ಆರ್‌ಜೆಡಿ 144, ಕಾಂಗ್ರೆಸ್ 70 ಸ್ಥಾನಗಳಲ್ಲಿ ಸ್ಪರ್ಧೆ

ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಮಹಾಘಟಬಂಧನ್ ಸಮಸ್ಯೆ ಬಗೆಹರಿದಿದ್ದು, ಸೀಟ್ ಹಂಚಿಕೆ ಸಹ ಇತ್ಯರ್ಥವಾಗಿದೆ. ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ನೇತೃತ್ವದಲ್ಲಿ ವಿವಿಧ ಪಕ್ಷಗಳು ಸ್ಪರ್ಧೆಗಿಳಿಯುತ್ತಿದ್ದು, ಆರ್‌ಜೆಡಿ 144, ಕಾಂಗ್ರೆಸ್ 70 ಕ್ಷೇತ್ರಗಳನ್ನು ಹಂಚಿಕೆ ಮಾಡಿಕೊಂಡಿವೆ. ಅಲ್ಲದೇ ಲಾಲೂಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ.

ಪಾಟ್ನಾದಲ್ಲಿ ಸುದ್ದಿಗೋಷ್ಠಿ ನಡೆಸಿ ಸೀಟ್ ಹಂಚಿಕೆ ಕುರಿತು ಮಾಹಿತಿ ನೀಡಿದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಆರ್‍ಜೆಡಿ, ಸಿಪಿಐ, ಸಿಪಿಎಂ ಹಾಗೂ ವಿಕಾಸ್‍ಶೀಲ್ ಇನ್ಸಾನ್ ಪಕ್ಷಗಳು ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ನಾಯಕತ್ವದಲ್ಲಿ ಆರ್‍ಜೆಡಿಗೆ ಬೆಂಬಲ ನೀಡಿದ್ದು, ಈ ಪಕ್ಷಗಳು ಒಟ್ಟು 144 ಸ್ಥಾನಗಳಲ್ಲಿ ಸ್ಪರ್ಧೆ ನಡೆಸಲಿವೆ. ಉಳಿದಂತೆ ಕಾಂಗ್ರೆಸ್ 70 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

ಈ 144 ಸ್ಥಾನಗಳ ಪೈಕಿ ಸಿಪಿಐ(ಎಂ)4, ಸಿಪಿಐ 6 ಹಾಗೂ ಸಿಪಿಎಂ(ಎಂ-ಎಲ್) 19 ಸ್ಥಾನಗಳಲ್ಲಿ ಸ್ಪರ್ಧೆಗಿಳಿದರೆ, ಉಪಚುನಾವಣೆಯ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರ ಹಾಗೂ 70 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಣಕ್ಕಿಳಿಯುತ್ತಿದೆ. 144 ಕ್ಷೇತ್ರಗಳಲ್ಲಿ ಆರ್‌ಜೆಡಿ ಸ್ಪರ್ಧೆಗೆ ಇಳಿಯುತ್ತಿದೆ.

ಮೂಲಗಳ ಪ್ರಕಾರ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ದೂತ ಭೋಲಾ ಯಾದವ್ ಗುರುವಾರ ರಾಂಚಿಯಿಂದ ಪಾಟ್ನಾಕ್ಕೆ ಮರಳಿದ ಬಳಿಕ ಸೀಟ್ ಹಂಚಿಕೆ ಕಸರತ್ತು ವೇಗ ಪಡೆದುಕೊಂಡಿದೆ.

ಈ ಮಧ್ಯೆ ವಿಕಾಸ್‍ಶೀಲ್ ಇನ್ಸಾನ್ ಪಕ್ಷದ ಮುಖ್ಯಸ್ಥ ಮುಖೇಶ್ ಸಹಾನಿ ಮೈತ್ರಿ ಕುರಿತು ಅಸಮಾಧಾನ ವ್ಯಕ್ತಪಡಿಸಿ, ನಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಸುದ್ದಿಗೋಷ್ಠಿಯಿಂದ ಹೊರ ನಡೆದಿದ್ದಾರೆ. ನಮ್ಮನ್ನು ನಿರ್ಲಕ್ಷಿಸಲಾಗುತ್ತಿದ್ದು, ಮೈತ್ರಿಯಿಂದ ನಾವು ಹೊರ ನಡೆಯುತ್ತಿದ್ದೇವೆ. ಈ ಕುರಿತು ನಾಳೆ ಮಾಧ್ಯಮದವರೊಂದಿಗೆ ಮಾತನಾಡುತ್ತೇವೆ ಎಂದು ಮಹಾಘಟಬಂಧನ ನಾಯಕರ ಮುಂದೆಯೇ ಹೇಳಿ ಹೊರ ನಡೆದಿದ್ದಾರೆ.

ಅಕ್ಟೋಬರ್ 28, ನವೆಂಬರ್ 3 ಮತ್ತು ನವೆಂಬರ್ 7ರಂದು ಮೂರು ಹಂತಗಳಲ್ಲಿ ಬಿಹಾರದ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ನೆವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

Comments

Leave a Reply

Your email address will not be published. Required fields are marked *