ಬಿಸಿಯೂಟ ಆಹಾರ ಧಾನ್ಯಕ್ಕೆ ಕಳ್ಳರ ಕಾಟ – ಶಾಲೆಯಲ್ಲಿಯೇ ವಾಸ್ತವ್ಯ ಮಾಡಿ ರೇಷನ್ ಕಾಪಾಡಿದ ಹೆಡ್ ಮಾಸ್ಟರ್

ಯಾದಗಿರಿ: ಕಳ್ಳರ ಕಾಟಕ್ಕೆ ಬೇಸತ್ತು ಶಿಕ್ಷಕರೊಬ್ಬರು ಬಿಸಿಯೂಟ ಆಹಾರ ಧಾನ್ಯ ಕಾಯಲು ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಮಾಡಿ ಆಹಾರ ಧಾನ್ಯ ಕಳ್ಳತನವಾಗದಂತೆ ಸರ್ಪಗಾವಲು ಹಾಕಿಕೊಂಡಿದ್ದಾರೆ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ಸಿದ್ದಣ್ಣಗೌಡ ಅವರು ಆಹಾರ ಧಾನ್ಯಗಳಿಗೆ ಶಾಲೆಯಲ್ಲಿ ವಾಸ್ತವ್ಯ ಮಾಡಿ ಆಹಾರ ಧಾನ್ಯಗಳ ರಕ್ಷಿಸಿದ್ದಾರೆ. ಸರ್ಕಾರ ಈಗಾಗಲೇ 1 ರಿಂದ 10 ನೇ ತರಗತಿ ಶಾಲೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ನವೆಂಬರ್ ನಿಂದ ಎಪ್ರಿಲ್ ತಿಂಗಳ ವರಗಿನ 5 ತಿಂಗಳ ಆಹಾರ ಧಾನ್ಯವನ್ನು ಅಕ್ಷರ ದಾಸೋಹ ಯೋಜನೆಯಡಿ ಶಾಲೆಗಳಿಗೆ ಪೂರೈಕೆ ಮಾಡಿದೆ. ಅದೇ ರೀತಿ ಮಾಲಹಳ್ಳಿ ಗ್ರಾಮದ ಶಾಲೆಯ ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂ. ವೆಚ್ಚದ ಆಹಾರ ಧಾನ್ಯ ಪೂರೈಕೆ ಮಾಡಲಾಗಿದೆ. ಅಕ್ಕಿ, ಗೋಧಿ, ತೊಗರಿ ಬೇಳೆ, ಉಪ್ಪು, ಅಡುಗೆ ಎಣ್ಣೆ ಪೂರೈಕೆ ಮಾಡಲಾಗಿದೆ.

ಕೆಲ ಶಾಲೆಗಳಲ್ಲಿ ರಾತ್ರಿ ದುಷ್ಕರ್ಮಿಗಳು ಶಾಲೆ ಬೀಗ ಮುರಿದು ಮಕ್ಕಳ ಬಿಸಿಯೂಟದ ಆಹಾರ ಧಾನ್ಯ ಕಳ್ಳತನ ಮಾಡಿದ್ದಾರೆ. ಇದೇ ತಿಂಗಳ ಯಾದಗಿರಿ ಜಿಲ್ಲೆಯ ಬಲಶೆಟ್ಟಿಹಾಳ ಶಾಲೆಯಲ್ಲಿ ಕೂಡ ಖದೀಮರು ಶಾಲೆ ಬೀಗ ಮುರಿದು ಅಡುಗೆ ಎಣ್ಣೆ ಕಳ್ಳತನ ಮಾಡಿದ್ದರು. ಶಾಲೆಯಲ್ಲಿ ಸಂಗ್ರಹಿಸಿಟ್ಟಿದ್ದ ಆಹಾರ ಧಾನ್ಯ ಕಳ್ಳತನ ಮಾಡುತ್ತಿರುವದನ್ನು ಅರಿತು ಶಾಲೆ ಮುಖ್ಯ ಶಿಕ್ಷಕ ಸಿದ್ದಣ್ಣಗೌಡ ಮನೆ ಬಿಟ್ಟು ಶಾಲೆಯಲ್ಲಿ ಆಹಾರ ಧಾನ್ಯಗಳಿಗೆ ಸರ್ಪಗಾವಲು ಆಗಿದ್ದಾರೆ.

ಆಹಾರ ಧಾನ್ಯ ಕಳ್ಳರ ಪಾಲಾಗದಂತೆ ಶಾಲೆಯಲ್ಲಿ ವಾಸ್ತವ್ಯ ಮಾಡಿದ್ದು ಈಗ ಶಿಕ್ಷಕರ ಕಾರ್ಯಕ್ಕೆ ಎಲ್ಲಡೇ ಮೆಚ್ಚುಗೆ ವ್ಯಕ್ತವಾಗಿದೆ. ಇಂದು ಬೆಳಗ್ಗೆ ಶಾಲೆ ಮಕ್ಕಳಿಗೆ ಆಹಾರ ಧಾನ್ಯ ವಿತರಣೆ ಮಾಡಲಿದ್ದಾರೆ. ಇದನ್ನೂ ಓದಿ: ಯಾದಗಿರಿಯ ತಿಂಥಣಿ ರಾಜ್ಯದ ಮೊದಲ ಕೊರೊನಾ ಲಸಿಕೆ ಮುಕ್ತ ಗ್ರಾಮ ಪಂಚಾಯ್ತಿ

Comments

Leave a Reply

Your email address will not be published. Required fields are marked *