ಮದ್ವೆಯಾದ್ರೆ ಪತ್ನಿ ಪೋಷಕರಿಂದ ದೂರ ಮಾಡೋ ಭಯ- ಟೆಕ್ಕಿ ಆತ್ಮಹತ್ಯೆ

ಬೆಂಗಳೂರು: ನಗರದ ಅಪಾರ್ಟ್‍ಮೆಂಟ್ ಮೇಲಿಂದ ಹಾರಿ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಬೆನ್ನಿಗಾನಹಳ್ಳಿ ಸಮೀಪದ ನಡೆದಿದೆ.

ಉತ್ತಮ್ ಹೆಗಡೆ (30) ಸಾವನ್ನಪ್ಪಿದ ಟೆಕ್ಕಿ. ಮೃತ ಟೆಕ್ಕಿ ತನ್ನ ಕುಟುಂಬದೊಂದಿಗೆ ಅಪಾರ್ಟ್‍ಮೆಂಟ್‍ನ ಫ್ಲ್ಯಾಟ್‍ವೊಂದರಲ್ಲಿ ವಾಸಮಾಡುತ್ತಿದ್ದ. ನಗರದ ಖಾಸಗಿ ಕಂಪೆನಿಯಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಉತ್ತಮ್ ಹೆಗಡೆ, ನಿನ್ನೆ ರಾತ್ರಿ ಎಂದಿನಂತೆ ಎಲ್ಲರೊಂದಿಗೆ ಬೆರೆತು ಊಟ ಮಾಡಿ ಮಲಗಿದ್ದ ಎಂಬ ಮಾಹಿತಿ ಲಭಿಸಿದೆ.

ಇಂದು ನಸುಕಿವ ಜಾವ 3 ಗಂಟೆ ಸಮಯದಲ್ಲಿ ಅಪಾರ್ಟ್‍ಮೆಂಟ್ ನಿಂದ ಹಾರಿ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸದ್ಯ ಟೆಕ್ಕಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿವಿ ರಾಮನ್ ನಗರ ಆಸ್ಪತ್ರೆಗೆ ರವಾನಿಸಿದ್ದಾರೆ.

ಉತ್ತಮ್ ಮನೆಯಲ್ಲಿ ಆತನ ಮದುವೆಗಾಗಿ ಯುವತಿಯನ್ನು ಹುಡುಕುತ್ತಿದ್ದರು. ಆದರೆ ಮದುವೆಯಾದರೆ ಬರುವ ಯುವತಿ ಎಲ್ಲಿ ತನ್ನನ್ನು ಪೋಷಕರೊಂದಿಗೆ ದೂರ ಮಾಡುತ್ತಾಳೋ ಎಂಬ ಭಯ ಉತ್ತಮ್‍ಗೆ ಕಾಡುತ್ತಿತ್ತು. ಹೀಗಾಗಿ ಆತನಿಗೆ ಎರಡು ಮೂರು ಬಾರಿ ಕೌನ್ಸೆಲಿಂಗ್ ಸಹ ಮಾಡಿಸಲಾಗಿತ್ತು. ಏನು ಆಗಲ್ಲ ಎಂದು ಮದುವೆ ಮಾಡಿಕೊಳ್ಳಲು ಕುಟುಂಬಸ್ಥರು ಉತ್ತಮ್ ಮನವೊಲಿಸಲು ಮುಂದಾಗಿದ್ದರು ಎನ್ನಲಾಗಿದೆ. ಈ ನಡುವೆ ಉತ್ತಮ್ ಆತ್ಮಹತ್ಯೆಗೆ ಶರಣಾಗಿರುವ ಅನುಮಾನ ಮೂಡಿದೆ. ಘಟನೆ ಕುರಿತು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *