ಬಿರುಸಿನ ಪ್ರಚಾರದ ನಡುವೆಯೂ ‘ಚಕ್ರವರ್ತಿ’ಯಿಂದ ಮಾಸ್ಕ್ ಜಾಗೃತಿ

ಬೆಂಗಳೂರು: ಆರ್‍ಆರ್ ನಗರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಮತ ಬೇಟೆಗಿಳಿದಿದ್ದಾರೆ. ಮತ ಪ್ರಚಾರ ಬಿರುಸಿನಿಂದ ಸಾಗುತ್ತಿದ್ದು, ಈ ಮಧ್ಯೆ ನಟ ದರ್ಶನ್ ಜಾಗೃತಿ ಕೂಡ ಮೂಡಿಸಿದ್ದಾರೆ.

ಹೌದು. ತೆರೆದ ವಾಹನದಲ್ಲಿ ಮತಯಾಚನೆ ಮಾಡುತ್ತಿರುವ ‘ಸಾರಥಿ’ ಮಾಸ್ಕ್ ಹಾಕಿಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ. ನೆಚ್ಚಿನ ನಟನನ್ನು ನೋಡಲು ಜನ ಕಟ್ಟಡಗಳ ಮೇಲೆ ಕುಳಿತಿದ್ದು, ಅಲ್ಲಿಂದಲೇ ‘ಗಜ’ನಿಗೆ ಜೈಕಾರ ಹಾಕುತ್ತಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ‘ದಾಸ’ ಮಾಸ್ಕ್ ಹಾಕಿಕೊಳ್ಳಿ ಎಂದು ಸನ್ನೆಯ ಮೂಲಕವೇ ಕೇಳಿಕೊಂಡಿದ್ದಾರೆ.

ಇತ್ತ ‘ಭೂಪತಿ’ಗೆ ಯಶವಂತಪುರದ ಬಿ.ಕೆ.ನಗರದಲ್ಲಿ ಸೇಬಿನ ಹಾರ ರೆಡಿಯಾಗಿದೆ. ಜೆಸಿಬಿ ಮೂಲಕ 200 ಕೆಜಿ ತೂಕದ ಸೇಬಿನ ಹಾರವನ್ನು ಅಭಿಮಾನಿಗಳು ದರ್ಶನ್ ಗೆ ಹಾಕಲಿದ್ದಾರೆ. ರೋಡ್ ಶೋ ವೇಳೆ ದರ್ಶನ್ ಹಾಗೂ ಮುನಿರತ್ನ ಅವರಿಗೆ ನಟಿ ಅಮೂಲ್ಯ ಹಾಗೂ ಪತಿ ಜಗದೀಶ್, ರಾಕ್ ಲೈನ್ ವೆಂಕಟೇಶ್ ಮತ್ತಿತರರು ಸಾಥ್ ನೀಡಿದ್ದಾರೆ.

ಪ್ರಚಾರಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ಮುನಿರತ್ನ ಅವರು ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕ್ಷೇತ್ರದ ಜನತೆಗೆ ದಿನಸಿ ವಿತರಿಸುವ ಮೂಲಕ ಸಾಕಷ್ಟು ಸಹಾಯ ಮಾಡಿದ್ದಾರೆ. ಹೀಗಾಗಿ ಮಾನವೀಯತೆಯ ದೃಷ್ಟಿಯಿಂದ ನಾನು ಅವರ ಪರ ಪ್ರಚಾರಕ್ಕೆ ತೆರಳುತ್ತಿದ್ದೇನೆ. ಮುನಿರತ್ನ ಬೆಂಬಲಿಸಲು ಅವರು ಮಾಡಿರುವ ಸಹಾಯವೇ ಸಾಕು. ಅವರು ಕರೆದಲ್ಲಿಗೆ ಹೋಗಿ ಪ್ರಚಾರ ಮಾಡ್ತೀನಿ. ಅವರು ನನ್ನ ಅತ್ಯಂತ ಆಪ್ತರು. ಸಂಕಷ್ಟಕ್ಕೆ ನಿಂತವರ ಪರ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದರು.

Comments

Leave a Reply

Your email address will not be published. Required fields are marked *