ಬಿಬಿಎಂಪಿ ಮಹಿಳಾ ಅಧಿಕಾರಿಯಿಂದ ಕಿರುಕುಳ – ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಬಿಬಿಎಂಪಿ ಮಹಿಳಾ ಅಕೌಂಟ್ಸ್ ಸೂಪರಿಂಡೆಂಟ್ ನೀಡುತ್ತಿರುವ ಕಿರುಕುಳ ಸಹಿಸಲಾರದೆ ಗುತ್ತಿಗೆದಾರರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಿಲಿಕಾನ್ ಸಿಟಿಯ ಜಯನಗರಲ್ಲಿ ನಡೆದಿದೆ.

ಗಿರೀಶ್ (36) ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆದಾರ. ಇವರು ಕಾರಿನಲ್ಲೇ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು, ಸದ್ಯ ಗೀರೀಶ್ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಯನಗರದ ಬಿಬಿಎಂಪಿ ಅಕೌಂಟ್ ಸೂಪರಿಂಡೆಂಟ್ ಉಷಾ ಕಿರುಕುಳ ನೀಡಿದ ಅಧಿಕಾರಿ.

ಗಿರೀಶ್ ಜಯನಗರ ಪಾರ್ಕ್ ನಿರ್ವಹಣೆಯ ಗುತ್ತಿಗೆ ನೀಡುವಂತೆ ಕೇಳಿದ್ದಾರೆ. ಆಗ ಉಷಾ ಹಣದ ಬೇಡಿಕೆ ಇಟ್ಟಿದ್ದಾರೆ. ಆದ್ದರಿಂದ ಹಣವನ್ನು ನೀಡುತ್ತೇನೆ ಎಂದು ಗಿರೀಶ್ ಗ್ಯಾರೆಂಟಿಯಾಗಿ ತನ್ನ ಇನ್ನೋವಾ ಕಾರಿನ ಡಾಕ್ಯುಮೆಂಟ್ಸ್ ಅನ್ನು ಆಕೆಗೆ ನೀಡಿದ್ದರು. ಆದರೆ ಕಳೆದು ಒಂದು ವಾರದಿಂದ ಉಷಾ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಣ ನೀಡಲು ನಿರಾಕರಿಸಿದಾಗ ಉಷಾ ತನ್ನ ಸಂಬಂಧಿಕರಿಂದ ಗಿರೀಶ್ ವಿರುದ್ಧ ದೂರು ನೀಡಿಸಿದ್ದಾರೆ.

ಇದಲ್ಲದೆ ಉಷಾ ಸಂಬಂಧಿ ದೀಪಕ್ ರಿಂದ ಗಿರೀಶ್‍ಗೆ ಜೀವ ಬೆದರಿಕೆ ಕೂಡ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಎಲ್ಲ ವಿಚಾರಗಳಿಂದ ದೈಹಿಕ ಹಾಗೂ ಮಾನಸಿಕವಾಗಿ ನೊಂದಿದ್ದ ಗೀರೀಶ್ ಉಷಾಳ ಕಾಟ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತನ್ನ ಇನ್ನೋವಾ ಕಾರಿನಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಗೀರೀಶ್ ಅವರ ಪತ್ನಿ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಉಷಾ ಹಾಗೂ ಸಂಬಂಧಿಕ ದೀಪಕ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಪೊಲೀಸರು ಐಪಿಸಿ ಸೆಕ್ಷನ್ 384, 504, 506, 34 ಅಡಿಯಲ್ಲಿ ಎಫ್‍ಐಆರ್ ದಾಖಲು ಮಾಡಿದ್ದಾರೆ.

Comments

Leave a Reply

Your email address will not be published. Required fields are marked *