ಬಿಜೆಪಿ ಹೈಕಮಾಂಡಿಗೆ ತಲೆನೋವು ತಂದ ಮೀಸಲಾತಿ ಹೋರಾಟ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಈಗ ಮೀಸಲಾತಿ ಹೋರಾಟ ತಲೆನೋವು ತಂದಿದೆ. ಏಕಕಾಲಕ್ಕೆ ಮೂರು ಪ್ರಬಲ ಸಮುದಾಯಗಳಿಂದ ಮೀಸಲಾತಿ ಹೋರಾಟ ತೀವ್ರಗೊಳ್ಳುತ್ತಿರುವ ಕಾರಣ ಬಿಜೆಪಿ ಸಚಿವರು, ಶಾಸಕರು, ಮುಖಂಡರಿಗೆ ಸಂದೇಶ ರವಾನೆ ಮಾಡಿ ಸುಮ್ಮನಿರಿಸಲು ಹೈಕಮಾಂಡ್‌ ಮುಂದಾಗಿದೆ.

ಹೌದು. ಪಂಚಮಸಾಲಿ, ಕುರುಬ, ವಾಲ್ಮೀಕಿ ಸಮುದಾಯದಿಂದ ಮೀಸಲಾತಿ ಹೋರಾಟ ಈಗ ಜಾಸ್ತಿಯಾಗುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರೂ ಈ ಹೋರಾಟದಲ್ಲಿ ಬಿಜೆಪಿ ಸಚಿವರು, ಶಾಸಕರು ಮುಂದಾಳತ್ವ ವಹಿಸಿರುವುದು ರಾಷ್ಟ್ರೀಯ ನಾಯಕರಿಗೆ ದೊಡ್ಡ ತಲೆನೋವಾಗಿದೆ.

ಕುರುಬ ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಸಚಿವ ಈಶ್ವರಪ್ಪ ಜೊತೆ ಸರ್ಕಾರದ ಮೂವರು ಸಚಿವರು ಭಾಗಿಯಾಗಿದ್ದಾರೆ. ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿ ಶಾಸಕ ಯತ್ನಾಳ್ ಸಕ್ರಿಯವಾಗಿದ್ದರೆ ವೀರಶೈವ-ಲಿಂಗಾಯತ ಒಬಿಸಿ ಮೀಸಲಾತಿ ಪರ ಬಿಎಸ್‍ವೈ ಸರ್ಕಾರದ ಸಚಿವರಿದ್ದಾರೆ.

ಒಂದು ವೇಳೆ ಮೀಸಲಾತಿ ನೀಡಿದರೆ ಇತರ ಸಮಾಜಗಳಿಗೆ ಪೆಟ್ಟು ಬೀಳಬಹುದು ಎಂಬ ಮಾಹಿತಿ ಹೈಕಮಾಂಡ್‌ ಅಂಗಳಕ್ಕೆ ತಲುಪಿದೆ. ಈ ಕಾರಣಕ್ಕೆ ಮೀಸಲಾತಿ ಹೋರಾಟ ತೀವ್ರ ಹೊತ್ತಲ್ಲೇ ಗುರುವಾರ ಬಿಜೆಪಿ ಹೈಕಮಾಂಡ್‍ನಿಂದ ಸಂದೇಶ ಹೊತ್ತುಕೊಂಡು ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಬೆಂಗಳೂರಿಗೆ ಬರುತ್ತಿದ್ದಾರೆ.

ಹಾಸನದಲ್ಲಿ ರಾಜ್ಯ ಬಿಜೆಪಿಯ ವಿವಿಧ ಘಟಕಗಳು, ಸಹ ಸಂಚಾಲಕರ ಸಭೆ ನಡೆಯಲಿದ್ದು ಅಂದು ಸಂಜೆ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಯಲಿದೆ. ಸಿಎಂ ಬಿಎಸ್‍ವೈ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಜೊತೆ ಮೀಸಲಾತಿ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.

ಹೈಕಮಾಂಡ್‌ ಆತಂಕ ಏನು?
ಮೀಸಲಾತಿ ಹೋರಾಟದ ಗೊಂದಲದಿಂದ ಬಿಜೆಪಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಈ ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಕಾಂಗ್ರೆಸ್ ಬಹುದೊಡ್ಡ ನಷ್ಟ ಅನುಭವಿಸಿದೆ. ಕಾಂಗ್ರೆಸ್‍ಗೆ ಬಂದ ಪರಿಸ್ಥಿತಿ ನಮ್ಮ ಪಕ್ಷಕ್ಕೂ ಬಾರದಂತೆ ಮೀಸಲಾತಿ ವಿಚಾರದಲ್ಲಿ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಬೇಕು. ಈ ಕಾರಣಕ್ಕೆ ಬಿಜೆಪಿ ಸಚಿವರು, ಶಾಸಕರು, ಮುಖಂಡರು ಸುಮ್ಮನಿರಬೇಕು.

Comments

Leave a Reply

Your email address will not be published. Required fields are marked *