ಬಿಎಸ್‍ವೈ ಷರತ್ತು – ನಾಲ್ವರ ಭವಿಷ್ಯ ಹೈಕಮಾಂಡ್ ಕೈಯಲ್ಲಿ!

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸೇರುವವರ ಹೆಸರು ಇಂದು ಅಧಿಕೃತವಾಗಲಿದ್ದು, ಸಂಜೆಯೊಳಗೆ ಪಟ್ಟಿ ಪ್ರಕಟವಾಗಲಿದೆ. ರಾಜೀನಾಮೆಗೂ ಮುನ್ನ ಯಡಿಯೂರಪ್ಪ ಹಾಕಿದ ಷರತ್ತುಗಳಿಂದಾಗಿ ನಾಲ್ವರಿಗೆ ಸಚಿವ ಸ್ಥಾನ ನೀಡಬೇಕಾ ಅಥವಾ ಬೇಡ್ವಾ ಅನ್ನೋ ಗೊಂದಲದಲ್ಲಿ ಹೈಕಮಾಂಡ್ ಸಿಲುಕಿದೆ ಎನ್ನಲಾಗಿದೆ. ಹಾಗಾಗಿ ಆ ನಾಲ್ವರ ಭವಿಷ್ಯ ಹೈಕಮಾಂಡ್ ನಲ್ಲಿದ್ದು, ಯಾರಿಗೆ ಮಂತ್ರಿಗಿರಿ ಅನ್ನೋದು ಸಂಜೆ ಫೈನಲ್ ಆಗಲಿದೆ.

ಮೂರು ಪಟ್ಟಿ:
ತಮ್ಮ ವಿರೋಧಿ ಬಣಕ್ಕೆ ಸೆಡ್ಡು ಹೊಡೆಯಲು ತೆರೆಮರೆಯಲ್ಲಿ ರಾಜಾಹುಲಿ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಿ ಸಂಪುಟದಲ್ಲಿ ಯಾರಿರಬೇಕು ಮತ್ತು ಯಾರು ಇರಬಾರದು ಅನ್ನೋ ಪಟ್ಟಿಯನ್ನು ಸಿಎಂ ಬೊಮ್ಮಾಯಿ ಮೂಲಕವೇ ಹೈಕಮಾಂಡ್‍ಗೆ ತಲುಪಿಸಿದ್ದಾರೆ. ಇತ್ತ ಬೊಮ್ಮಾಯಿ ಸಹ ತಮ್ಮದೊಂದು ಪಟ್ಟಿ ಸಹ ನೀಡಿದ್ದಾರೆ. ಇತ್ತ ಆರ್‍ಎಸ್‍ಎಸ್ ಜೊತೆ ಸೇರಿ ಹೈಕಮಾಂಡ್ ತನ್ನದೇ ಆದ ಪಟ್ಟಿಯೊಂದನ್ನು ಸಿದ್ಧ ಮಾಡಿಕೊಂಡಿದೆ ಎನ್ನಲಾಗಿದೆ. ಈ ಮೂರು ಪಟ್ಟಿಯಲ್ಲಿಯ ಕೆಲ ಹೆಸರುಗಳು ಮಂತ್ರಿಮಂಡಲ ಸೇರಿಕೊಳ್ಳಲಿವೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಬೊಮ್ಮಾಯಿ ಸಂಪುಟ ರಚನೆಗೆ 60:20:20 ಸೂತ್ರ

ನಾಲ್ವರ ಭವಿಷ್ಯ:
ತಮಗೆ ಆಡಳಿತ ನಡೆಸಲು ಅಡ್ಡಿಯಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಪಿ.ಯೋಗೇಶ್ವರ್ ಮತ್ತು ಅರವಿಂದ್ ಬೆಲ್ಲದ್‍ಗೆ ಸಚಿವ ಸ್ಥಾನ ನೀಡಬಾರದು. ನನ್ನ ತ್ಯಾಗಕ್ಕೆ ಪ್ರತಿಫಲವಾಗಿ ಪುತ್ರ ವಿಜಯೇಂದ್ರಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂಬ ಷರತ್ತು ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್ ಮುಂದೆ ಇರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ನಾಲ್ವರಿಗೆ ಸಚಿವ ಸ್ಥಾನ ನೀಡಬೇಕಾ ಅಥವಾ ಬೇಡ್ವಾ ಅನ್ನೋ ಇಕ್ಕಟ್ಟಿನಲ್ಲಿ ಹೈಕಮಾಂಡ್ ಸಿಲುಕಿದೆ ಎನ್ನಲಾಗಿದೆ.

ಸಂಜೆಯೊಳಗೆ ಪಟ್ಟಿ ರಿಲೀಸ್:
ಸೋಮವಾರ ರಾತ್ರಿ ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ನಾವು ಬೇರೆ ಬೇರೆ ವಿಂಗಡನೆ ಮಾಡಿರುವ ಎರಡ್ಮೂರು ಪಟ್ಟಿಗಳನ್ನು ಕೊಟ್ಟಿದ್ದೇನೆ. ನಮ್ಮ ಪಕ್ಷದಲ್ಲಿ ಯಾರೂ ವಲಸಿಗರಲ್ಲ, ಎಲ್ಲರೂ ಬಿಜೆಪಿಯವರೇ. ನಾವು ಹೇಳಿದ್ದನ್ನು ಕೇಳಿಸಿಕೊಂಡು ನಾಳೆ ಹೈಕಮಾಂಡ್‍ನಿಂದ ಪಟ್ಟಿ ಬಿಡುಗಡೆ ಮಾಡುತ್ತಾರೆ. ಡಿಸಿಎಂ ಹುದ್ದೆ ಸೃಷ್ಟಿ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಮಂಗಳವಾರ ಸಂಜೆಯೊಳಗೆ ಸಚಿವ ಸಂಪುಟ ಸೇರುವವರ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ. ಸಂಪುಟ ರಚನೆ ಕುರಿತು ಚರ್ಚೆ ಮಾಡಿದ್ದೇವೆ. ಎಷ್ಟು ಜನ ಮಂತ್ರಿಗಳಾಗಬೇಕು? ಎಷ್ಟು ಜನರು ಸಂಪುಟದಲ್ಲಿರಬೇಕು ಎಂಬುದನ್ನು ಹೈಕಮಾಂಡ್ ತಿಳಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಮುಂದೆ ‘ವಿಜಯ’ ಪ್ರಸ್ತಾಪದ ಇನ್‍ಸೈಡ್ ಸ್ಟೋರಿ

Comments

Leave a Reply

Your email address will not be published. Required fields are marked *