ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ವಿರುದ್ಧ ಎಫ್‍ಐಆರ್

ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಬಿಗ್‍ಬಿ ವಿರುದ್ಧ ಮಹಾರಾಷ್ಟ್ರದ ಬಿಜೆಪಿ ಶಾಸಕ ಅಭಿಮನ್ಯು ಪವಾರ್ ದೂರು ದಾಖಲಿಸಿದ್ದಾರೆ. ಇದೀಗ ಈ ದೂರಿನನ್ವಯ ಪೊಲೀಸರು ಬಿಗ್ ಬಿ ಹಾಗೂ ಕಾರ್ಯಕ್ರಮ ನಡೆಸಿದ ಚಾನೆಲ್ ಮೇಲೆ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಅಮಿತಾಬ್ ಬಚ್ಚನ್ ನಿರೂಪಣೆಯ ಕೌನ್ ಬನೇಗಾ ಕರೋಡ್‍ಪತಿಯಲ್ಲಿ ಶುಕ್ರವಾರ ಕರ್ಮವೀರ್ ವಿಶೇಷ ಎಪಿಸೋಡ್ ಪ್ರಸಾರ ಮಾಡಲಾಗಿತ್ತು. ಬಿಗ್ ಬಿ 6,40,000 ರೂಪಾಯಿಯ ನಗದು ಬಹುಮಾನಕ್ಕಾಗಿ ಪ್ರಶ್ನೆಯೊಂದನ್ನು ಕೇಳಿದರು. ಈ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ತಲ್ಲಣ ಉಂಟುಮಾಡಿದೆ.

ಬಿಗ್ ಬಿ ಕೇಳಿದ ಪ್ರಶ್ನೆ ಏನು?: 1927ರ ಡಿಸೆಂಬರ್ 25ರಂದು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಅವರ ಅನುಯಾಯಿಗಳು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟು ಹಾಕಿದರು?
ಆಯ್ಕೆ: ಎ. ವಿಷ್ಣುಪುರಾಣ, ಬಿ. ಭಗವದ್ಗೀತೆ, ಸಿ. ಋಗ್ವೇದ, ಡಿ. ಮನುಸ್ಮೃತಿ

ಸ್ಪರ್ಧೆಯಲ್ಲಿ ಭಾಗಿ ವಹಿಸಿದವರು ಮನುಸ್ಮೃತಿಯನ್ನು ಉತ್ತರವಾಗಿ ಹೇಳಿದರು. ಈ ವೇಳೆ ಬಿಗ್ ಬಿ ಇದು ಸರಿ ಉತ್ತರವೆಂದು ಘೋಷಿಸಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರಾಚೀನ ಹಿಂದೂ ಧರ್ಮ ಗ್ರಂಥದ ಪ್ರತಿಗಳನ್ನು ಸುಟ್ಟು ಹಾಕಿದರು ಎಂದು ವಿವರಿಸಿದರು.

ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದೆ. ನೆಟ್ಟಿಗರು ಟ್ವಿಟ್ಟರ್‍ನಲ್ಲಿ ಕಾರ್ಯಕ್ರಮದ ವಿರುದ್ಧ ಕಿಡಿಕಾರಿದ್ದಾರೆ. ಕೆಲವರು ಈ ಕಾರ್ಯಕ್ರಮವನ್ನು ಎಡಪಂಥೀಯ ಪ್ರಚಾರಕ್ಕಾಗಿ ಮಾಡಲಾಗುತ್ತಿದೆ ಎಂದರೆ ಮತ್ತೆ ಕೆಲವರು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Comments

Leave a Reply

Your email address will not be published. Required fields are marked *