ಬಾರ್ಡರ್‌ನಲ್ಲೇ ಜೋಡಿ ಮದ್ವೆ- ತಮಿಳುನಾಡು ಗಡಿದಾಟದ ವರ, ಕರ್ನಾಟಕ ಗಡಿದಾಟದ ವಧು

ಚಾಮರಾಜನಗರ: ಅಂತರ್ ರಾಜ್ಯ ಗಡಿದಾಟದೆ ಎರಡೂ ರಾಜ್ಯಗಳ ನೂತನ ಜೋಡಿಯೊಂದು ಬಾರ್ಡರ್‌ನಲ್ಲೇ  ಮದುವೆಯಾದ ವಿಶೇಷ ಘಟನೆ ರಾಜ್ಯದ ತಮಿಳುನಾಡು ಗಡಿಯಾದ ಪುಣಜನೂರು ಚೆಕ್ ಪೋಸ್ಟ್ ನಲ್ಲಿ ನಡೆದಿದೆ.

ಕೊಡಗು ಜಿಲ್ಲೆಯ ಗೋಣಿಕೊಪ್ಪದ ಹೊಂಬಾಳಯ್ಯ, ತ್ರಿವೇಣಿ ದಂಪತಿ ಪುತ್ರಿ ಯಶಸ್ಮಿತ ಹಾಗೂ ತಮಿಳುನಾಡಿನ ಮೆಟ್ಟುಪಾಳ್ಯಂ ನಿವಾಸಿ ಶಕ್ತಿವೇಲು-ಲತಾ ದಂಪತಿ ಪುತ್ರ ಸತೀಶ್ ಕುಮಾರ್ ಗಡಿ ದಾಟದೆ ಮದುವೆ ಮಾಡಿಕೊಂಡಿದ್ದಾರೆ.

ಕೊರೊನಾ ಲಾಕ್‍ಡೌನ್ 4.0 ನಲ್ಲಿ ಅಂತರ್ ರಾಜ್ಯಗಳ ಪ್ರವೇಶಕ್ಕೆ ನಿರ್ಬಂಧ ಇದೆ. ಹೀಗಾಗಿ ಗಡಿಯಲ್ಲಿರುವ ಗಣೇಶ ಗುಡಿಯಲ್ಲಿ ವರ ತಮಿಳುನಾಡು ಗಡಿದಾಟದೆ, ವಧು ಕರ್ನಾಟಕ ಗಡಿ ದಾಟದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಂತರ್ ರಾಜ್ಯ ಪ್ರವೇಶ ಅನುಮತಿ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಗಡಿಗೆ ಬಂದ ಜೋಡಿ ಮತ್ತು ಪೋಷಕರು ಬಾರ್ಡರ್‌ನಲ್ಲೇ ವಿವಾಹ ನಡೆಸಿದ್ದಾರೆ. ಬಳಿಕ ತಮ್ಮ ತಮ್ಮ ತವರಿಗೆ ತೆರಳಿದ್ದಾರೆ. ಈ ಮದುವೆಗೆ ಚೆಕ್ ಪೋಸ್ಟ್ ನ ಕರ್ತವ್ಯ ನಿರತ ಸಿಬ್ಬಂದಿ ಸಾಕ್ಷಿಯಾದರು.

ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ನಿಗದಿ ಪಡಿಸಿದ ದಿನಾಂಕದಂದು ಸಾಂಸಾರಿಕ ಜೀವನಕ್ಕೆ ಈ ಇಬ್ಬರು ಅಂತರ್ ರಾಜ್ಯ ಜೋಡಿಗಳು ಕಾಲಿಟ್ಟು ಎಲ್ಲರ ಗಮನ ಸೆಳೆದಿದ್ದಾರೆ.

Comments

Leave a Reply

Your email address will not be published. Required fields are marked *