ಬಾಬಾ ಕಾ ಡಾಬಾ ಮಾಲೀಕನಿಂದ ಆತ್ಮಹತ್ಯೆಗೆ ಯತ್ನ – ಆಸ್ಪತ್ರೆಗೆ ದಾಖಲು

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಒಂದೇ ವೀಡಿಯೋದಿಂದ ವೃದ್ಧ ದಂಪತಿಯ ಬದುಕು ಬದಲಾದ ತಿಳಿದೇ ಇದೆ. ಅದೇ ಬಾಬಾ ಕಾ ಡಾಬಾ ಮಾಲೀಕ ಕಾಂತ ಪ್ರಸಾದ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದು, ದೆಹಲಿಯ ಸಫ್ತರ್‍ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಪ್ರಸಾದ್ ಅವರು ಆಸ್ಪತ್ರೆಗೆ ದಾಖಲಾಗಿರುವ ಕುರಿತು ರಾತ್ರಿ 11.50ರ ಸುಮಾರಿಗೆ ಸಫ್ತರ್‍ಜಂಗ್ ಆಸ್ಪತ್ರೆಯಿಂದ ನಮಗೆ ಮಾಹಿತಿ ಲಭ್ಯವಾಗಿಯಿತು. ತಕ್ಷಣವೇ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಎಂಎಲ್‍ಸಿ (ಮೆಡಿಕೋ ಲೀಗಲ್ ಕೇಸ್) ಸಂಗ್ರಹಿಸಿದರು. ಪ್ರಸಾದ್ ಅವರು ಆಲ್ಕೋಹಾಲ್ ಹಾಗೂ ನಿದ್ದೆ ಮಾತ್ರೆ ತೆಗೆದುಕೊಂಡಿದ್ದು, ಪ್ರಜ್ಞೆ ಕಳೆದುಕೊಂಡಿದ್ದರು ಎಂದು ಡಿಸಿಪಿ ಅತುಲ್ ಕುಮಾರ್ ಠಾಕೂರ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಖರ್ಚು ಮಾಡಿದ್ದು 1 ಲಕ್ಷ, ಕೈಗೆ ಬಂದಿದ್ದು ಬರೀ 35 ಸಾವಿರ – ಬಾಬಾ ಕಾ ಡಾಬಾ ಹೊಸ ಶಾಪ್ ಕ್ಲೋಸ್!

ಕಾಂತ ಪ್ರಸಾದ್ ಅವರ ಮಗ ಕರಣ್ ಪೊಲೀಸರಿಗೆ ಮಾಹಿತಿ ನೀಡಿದ್ದು, ನಮ್ಮ ತಂದೆ ಮದ್ಯ ಸೇವಿಸಿದ್ದು, ಜೊತೆಗೆ ನಿದ್ದೆ ಮಾತ್ರೆಗಳನ್ನು ಸಹ ನುಂಗಿದ್ದರು.

ಈ ಕರಿತು ಕಾಂತ ಪ್ರಸಾದ್ ಅವರ ಪತ್ನಿ ಬಾದಾಮಿ ದೇವಿ ಸಹ ಪ್ರತಿಕ್ರಿಯಿಸಿ ಅಂಗಡಿ ಬಳಿಯೇ ಪ್ರಜ್ಞಾಹೀನರಾಗಿ ಬಿದ್ದರು. ಅವರು ಏನು ತಿಂದರು, ಏನು ಕುಡಿದರು ಎಂಬುದು ನನಗೆ ತಿಳಿದಿಲ್ಲ. ಪ್ರಜ್ಞಾಹೀನರಾಗಿ ಬೀಳುತ್ತಿದ್ದಂತೆ ಆಸ್ಪತ್ರೆಗೆ ಕೊಂಡೊಯ್ದರು. ವೈದ್ಯರು ಸಹ ನಮ್ಮ ಬಳಿ ಏನೂ ಹೇಳಿಲ್ಲ. ಅವರು ಏನು ಯೋಚಿಸುತ್ತಿದ್ದರೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಬಾಬಾ ಕಾ ಡಾಬಾ ವೀಡಿಯೋ ಸಖತ್ ವೈರಲ್ ಆಗಿತ್ತು. ದೆಹಲಿಯ ಮಾಳವಿಯಾ ನಗರದಲ್ಲಿ ರಸ್ತೆ ಬದಿ ಹೋಟೆಲ್ ನಡೆಸುತ್ತಿದ್ದ ವೃದ್ಧ ದಂಪತಿ, ಕೊರೊನಾದಿಂದಾಗಿ ಅನುಭವಿಸುತ್ತಿರುವ ಕಷ್ಟವನ್ನು ವೀಡಿಯೋದಲ್ಲಿ ತೋರಿಸಲಾಗಿತ್ತು. ಈ ವೀಡಿಯೋ ಗೌರವ್ ತಮ್ಮ ಯು ಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿಕೊಂಡು, ವೃದ್ಧ ದಂಪತಿಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದದ್ದರು. ಬಳಿಕ ಲಕ್ಷಾಂತರ ರೂಪಾಯಿ ಹಣ ಹರಿದು ಬಂದಿತ್ತು. ಬಳಿಕ ಹೊಸ ಹೋಟೆಲ್‍ನ್ನು ಸಹ ತೆರೆದಿದ್ದರು. ಆದರೆ ಅಷ್ಟೇನು ವ್ಯಾಪಾರವಾಗದ ಕಾರಣ ಹೊಸ ಹೋಟೆಲ್ ಮುಚ್ಚಿ, ಮತ್ತೆ ಈ ಹಿಂದೆ ಇದ್ದ ಸಣ್ಣ ಹೋಟೆಲ್ ತೆರೆದಿದ್ದರು.

Comments

Leave a Reply

Your email address will not be published. Required fields are marked *