ಬರ, ನೆರೆ ಎರಡೂ ಅನುದಾನ ನಿಮಗೇ, ನಾವ್ಯಾಕೆ ಇರೋದು- ಏಕವಚನದಲ್ಲಿ ಶಿವಲಿಂಗೇಗೌಡ-ಪ್ರೀತಂಗೌಡ ವಾಗ್ದಾಳಿ

ಹಾಸನ: ನೆರೆ ಪರಿಹಾರದ ವಿಚಾರದಲ್ಲಿ ಶಾಸಕರಿಬ್ಬರ ನಡುವೆ ವಾಕ್ಸಮರ ಏರ್ಪಟ್ಟಿದ್ದು, ಏಕವಚನದಲ್ಲೇ ವಾಗ್ವಾದ ನಡೆಸಿದ್ದಾರೆ. ಜೆಡಿಎಸ್‍ನ ಅರಿಸಿಕೇರೆ ಶಾಸಕ ಶಿವಲಿಂಗೇಗೌಡ ಹಾಗೂ ಬಿಜೆಪಿಯ ಹಾಸನ ಶಾಸಕ ಪ್ರೀತಂಗೌಡ ಅನುದಾನದ ವಿಚಾರದಲ್ಲಿ ಜಗಳವಾಡಿಕೊಂಡಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಇಬ್ಬರು ಶಾಸಕರು ಕಚ್ಚಾಡಿದ್ದು, ಬರಕ್ಕೆ ಹಣ ಬಂದ್ರೂ ನಿಮಗೇ, ಮಳೆಗೆ ಅನುದಾನ ಬಂದ್ರೂ ನಿಮಗೆ, ಹಾಗಿದ್ರೆ ನಾವ್ಯಾಕೆ ಇರೋದು ಎಂದು ಸಭೆಯಲ್ಲಿ ಶಿವಲಿಂಗೇಗೌಡ ಆಕ್ರೋಶ ಭರಿತವಾಗಿ ಮಾತನಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರೀತಂಗೌಡ ವಾಗ್ದಾಳಿ ನಡೆಸಿದ್ದು, ಹೌದು ಗೌಡ್ರೆ ನೀವು ಹೇಳ್ತಿರೋದು ಸರಿ, ಯಾವುದಕ್ಕೆ ಅನುದಾನ ಬಂದ್ರೂ ರೇವಣ್ಣೋರು ತಗೊಂಡ್ ಹೋಗ್ತಿದ್ದರು ಎಂದು ತಿರುಗೇಟು ನೀಡಿದ್ದಾರೆ.

ಶಿವಲಿಂಗೇಗೌಡರು ನೇರವಾಗಿ ರೇವಣ್ಣೋರಿಗೆ ಹೇಳೋಕ್ಕಾಗದೆ ನಮ್ಮೆದುರು ಹೇಳುತ್ತಿದ್ದಾರೆ. ರೇವಣ್ಣವರಿಗೆ ಹೇಳಿ, ಶಿವಲಿಂಗೇಗೌಡರು ನಿಮ್ಮ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದರು, ಪ್ರೀತಂಗೌಡ ಕೂಡ ಶಿವಲಿಂಗೇಗೌಡರಿಗೆ ಧ್ವನಿಗೂಡಿಸಿದರು ಎಂದು ಹೇಳಿ ಎಂದು ಶಿವಲಿಂಗೇಗೌಡರ ಮಾತಿಗೆ ಪ್ರೀತಂಗೌಡ ತಿರುಗೇಟು ನೀಡಿದ್ದಾರೆ.

ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಏಕವಚನದಲ್ಲಿ ಇಬ್ಬರು ಶಾಸಕರು ಜಗಳವಾಡಿದ್ದಾರೆ. ನೆರೆ ಪರಿಹಾರದಲ್ಲಿ ಸುಮಾರು 19 ಕೋಟಿ ರೂ. ಅನುದಾದ ಬಂದಿದೆ. ಸರಿಯಾಗಿ ಹಣ ಹಂಚಿಕೆ ಆಗಿಲ್ಲ. ಅರಸೀಕೆರೆ ಕ್ಷೇತ್ರಕ್ಕೆ ಏನೂ ಕೊಟ್ಟಿಲ್ಲ. ಇದೇನು ಜಿಲ್ಲೇನಾ? ಎಲ್ಲವನ್ನು ಬೇಕಾದಹಾಗೆ ಬಳಸಿಕೊಳ್ತಿದ್ದಾರೆ ಶಿವಲಿಂಗೇಗೌಡರು ಕಿಡಿಕಾರಿದ್ದಾರೆ. ಮಾತ್ರವಲ್ಲದೆ ನಿಂದು ಏನಿದೆ ಅದನ್ನು ನೀ ತಗೋ, ನಂದು ಏನಿದೆ ಅದನ್ನು ತಗೋತಿನಿ. ನಿನ್ನ ಕ್ಷೇತ್ರದ್ದು ನಾ ಕೇಳುತ್ತಿದ್ದೇನಾ ಎಂದು ಶಿವಲಿಂಗೇಗೌಡರು ಆಕ್ರೋಶ ಹೊರ ಹಾಕಿದ್ದಾರೆ.

ಅನುದಾನ ನೀನು ತಂದಿದ್ದು ಎನ್ನಬೇಡ, ಸರ್ಕಾರ ಕೊಟ್ಟಿರೋದು. ನಾವೇನು ದನ ಕಾಯೋಕೆ ಬಂದಿಲ್ಲ ಎಂದು ಮತ್ತೆ ಶಿವಲಿಂಗೇಗೌಡ ಕಿಡಿಕಾರಿದ್ದಾರೆ. ಶಿವಲಿಂಗೇಗೌಡರ ಆರೋಪಕ್ಕೆ ಪ್ರತ್ಯುತ್ತರ ನೀಡಲು ಮುಂದಾದ ಶಾಸಕ ಪ್ರೀತಂಗೌಡ, ನಿಮ್ಮ ಸರ್ಕಾರ ಇದ್ದಾಗ ನೀವು ತಂದಿದ್ದು ಅಂತೀರಿ, ನಮ್ಮ ಸರ್ಕಾರ ಇದ್ದಾಗ ನಾನೇ ತಂದಿದ್ದೇನೆ ಅಂತೀವಿ. ಇದು ಯಡಿಯೂರಪ್ಪನವರ ಸರ್ಕಾರ. ಯಡಿಯೂರಪ್ಪ ಅವರೇ ಕೊಟ್ಟಿರೊ ಅನುದಾನ ಎಂದೇ ಹೇಳೋದು. ನನಗೂ ಟೇಬಲ್ ಕುಟ್ಟಿ ಮಾತನಾಡಲು ಬರುತ್ತೆ ಎಂದು ಶಾಸಕ ಪ್ರೀತಂಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *