ಬರಗಾಲದಿಂದ ತತ್ತರಿಸಿದ್ದ ರಾಯಚೂರು ರೈತರಿಗೆ ಅತಿವೃಷ್ಟಿ ಪೆಟ್ಟು

– ಸತತ ಮಳೆಗೆ ಬೆಳೆಯನ್ನ ಕಿತ್ತು ಹಾಕ್ತಿರುವ ರೈತರು

ರಾಯಚೂರು: ಜಿಲ್ಲೆಯಲ್ಲಿ ಒಂದೆಡೆ ಪ್ರವಾಹ ಭೀತಿ ಇನ್ನೊಂದೆಡೆ ಐದಾರು ದಿನದಿಂದ ಸತತವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆ ರೈತರನ್ನ ಕಂಗೆಡಿಸಿದೆ. ಸತತ ಮಳೆಯಿಂದಾಗಿ ಜಿಲ್ಲೆಯಲ್ಲಿ ಬೆಳೆಯಲಾದ ಲಕ್ಷಾಂತರ ರೂಪಾಯಿ ಮೌಲ್ಯದ ಶೇಂಗಾ ಹಾಗೂ ಹತ್ತಿ ಬೆಳೆ ಹಾನಿಯಾಗಿದೆ. ನಷ್ಟ ಕಡಿಮೆ ಮಾಡಿಕೊಳ್ಳಲು ಸ್ವತಃ ರೈತರೇ ತಾವು ಬೆಳೆದ ಬೆಳೆಯನ್ನ ತಾವೇ ಕಿತ್ತು ಹಾಕುತ್ತಿದ್ದಾರೆ.

ಮಳೆಯಿಂದಾಗಿ ಜಮೀನಿನಲ್ಲಿ ನೀರು ನಿಲ್ಲುತ್ತಿರುವುದರಿಂದ ರಾಯಚೂರು ತಾಲೂಕಿನ ಸಾಥ್‍ಮೈಲ್ ಬಳಿ 10 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಹತ್ತಿ ಬೆಳೆಯನ್ನ ರೈತರೆ ಕಿತ್ತು ಹಾಕುತ್ತಿದ್ದಾರೆ. ಸತತವಾಗಿ ಮಳೆ ಸುರಿಯುತ್ತಿದ್ದು, ಹೊಲದಲ್ಲಿ ನೀರು ನಿಲ್ಲುತ್ತಿದೆ. ಇದರಿಂದ ಹೊಲದಲ್ಲಿ ಕಸ ಹೆಚ್ಚಾಗಿ ಬೆಳೆಯುತ್ತದೆ. ಇದನ್ನ ತೆಗೆಯಲು ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಸಿಕ್ಕರೂ ಕೂಲಿ ಕಾರ್ಮಿಕರು ದುಬಾರಿ ಕೂಲಿಯನ್ನ ಕೇಳುತ್ತಿದ್ದಾರೆ. ಈಗಾಲೇ ಎಕರೆಗೆ ಮೂವತ್ತು ಸಾವಿರ ಖರ್ಚು ಮಾಡಿ ಬೆಳೆಯಲಾಗಿದೆ. ಪುನಃ ಬೆಳೆ ಉಳಿಸಿಕೊಂಡು ಬೆಳೆಯಲು ಕಳೆ ತೆಗೆದು ಹೆಚ್ಚು ರಸಗೊಬ್ಬರ ಹಾಕಬೇಕು. ಆದ್ರೆ ರಸಗೊಬ್ಬರ ಕೊರತೆಯಿದ್ದು ದುಬಾರಿಯಾಗಿರುವುದರಿಂದ ರೈತ ಬೆಳೆಯನ್ನೇ ಕಿತ್ತು ಹಾಕುತ್ತಿದ್ದಾನೆ.

 

ರಾಯಚೂರು ತಾಲೂಕಿನ ಗೋನವಾರ ಗ್ರಾಮದ ರಾಮಪ್ಪ ಎನ್ನುವ ರೈತ ತನ್ನ ಮೂರು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಶೇಂಗಾ ಬೆಳೆ ಕೈಗೆ ಬಂದರೂ ಮಳೆಯಿಂದಾಗಿ ಬಾಯಿಗೆ ಬರದ ತುತ್ತಾಗಿದೆ. ಬಿತ್ತಿದ್ದ ಬೆಳೆ ಫಲ ನೀಡಿದ್ದು, ಕಳೆದ ನಾಲ್ಕು ದಿನಗಳಿಂದ ಶೇಂಗಾ ಕಿತ್ತಲಾಗಿತ್ತು. ಆದ್ರೆ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕಿತ್ತಲಾಗಿರುವ ಶೇಂಗಾ ಬೆಳೆಗೆ ಮೊಳಕೆ ಬಂದು ಬೆಳೆ ಹಾನಿಯಾಗುತ್ತಿದೆ. ಇದರಿಂದ ರೈತನಿಗೆ ನಷ್ಟ ಸಂಭವಿಸಿದೆ. ಹೀಗಾಗಿ ಸರ್ಕಾರಕ್ಕೆ ಪರಿಹಾರ ನೀಡುವಂತೆ ರೈತ ಒತ್ತಾಯಿಸಿದ್ದಾನೆ.

Comments

Leave a Reply

Your email address will not be published. Required fields are marked *