ಬಡ ಕುಟುಂಬಗಳಿಗೆ 10 ಸಾವಿರ ನೆರವು ನೀಡಿ – ಕಾಂಗ್ರೆಸ್‍ನಿಂದ ಆನ್‍ಲೈನ್ ಅಭಿಯಾನ

ನವದೆಹಲಿ: ಲಾಕ್‍ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರ ನೆರವಿಗೆ ನಿಲ್ಲುವ ಪ್ರಯತ್ನ ಆರಂಭಿಸಿರುವ ಕಾಂಗ್ರೆಸ್, ಈ ಸಂಬಂಧ ಅಭಿಯಾನವೊಂದನ್ನು ಶುರು ಮಾಡಲು ನಿರ್ಧರಿಸಿದೆ.

ದೇಶದಲ್ಲಿರುವ ಶೇ.50 ಕುಟುಂಬಗಳ ಖಾತೆಗೆ ತಲಾ 10 ಸಾವಿರ ರೂಪಾಯಿ ಹಣ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಅಭಿಯಾನವನ್ನು ಕಾಂಗ್ರೆಸ್ ಹಮ್ಮಿಕೊಂಡಿದ್ದು, ಮೇ 28ರಂದು ಈ ಆನ್‍ಲೈನ್ ಮೂಲಕ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಸರಣಿ ಸುದ್ದಿಗೋಷ್ಠಿ ನಡೆಸುತ್ತಿರುವ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಹಲವು ಬಾರಿ ಬಡ ಜನರ ಖಾತೆಗಳಿಗೆ ನೇರ ಹಣ ಜಮಾವಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಕೇಂದ್ರ ಸರ್ಕಾರದಿಂದ ಯಾವುದೇ ಮನ್ನಣೆ ಸಿಗದ ಹಿನ್ನೆಲೆಯಲ್ಲಿ ಈ ಅಭಿಯಾನಕ್ಕೆ ಕಾಂಗ್ರೆಸ್ ಮುಂದಾಗಿದೆ.

ಇದಕ್ಕೂ ಮುನ್ನ ರಾಹುಲ್ ಗಾಂಧಿ, ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ಡಾ.ರಘುರಾಮ್ ರಾಜನ್ ಹಾಗೂ ಖ್ಯಾತ ಆರ್ಥಿಕ ತಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಅವರೊಂದಿಗೆ ವಿಡಿಯೋ ಸಂವಾದ ನಡೆಸಿ ಜನ ಸಾಮಾನ್ಯರಿಗೆ ನಗದು ಹಣದ ಅವಶ್ಯಕತೆ ಬಗ್ಗೆ ಚರ್ಚೆ ನಡೆಸಿದ್ದರು.

ಈ ನಡುವೆ ಬಡ ಜನರು ಮತ್ತು ವಲಸೆ ಕಾರ್ಮಿಕರ ವಿಚಾರದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ರಾಜಕೀಯ ಶುರುವಾಗಿದ್ದು, ವಲಸೆ ಕಾರ್ಮಿಕರಿಗೆ ರೈಲು ನೀಡಿ ಕಾಂಗ್ರೆಸ್ ಬೆಚ್ಚ ಭರಿಸುವುದಾಗಿ ಕಾಂಗ್ರೆಸ್ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿತ್ತು. ಇದು ವಿವಾದವಾಗುತ್ತಿದ್ದಂತೆ 85% ಕೇಂದ್ರ ಹಾಗೂ 15% ರಾಜ್ಯ ಸರ್ಕಾರದ ವೆಚ್ಚದಲ್ಲಿ ಶ್ರಮಿಕ್ ಹೆಸರಿನ ವಿಶೇಷ ಟ್ರೈನ್ ಓಡಿಸಲು ಸರ್ಕಾರ ಒಪ್ಪಿಗೆ ನೀಡಿತ್ತು. ಈ ನಡುವೆ ಪ್ರಿಯಾಂಕಾ ಗಾಂಧಿ ಸಾವಿರ ಬಸ್‍ಗಳಲ್ಲಿ ವಲಸೆ ಕಾರ್ಮಿಕರ ಸಂಚಾರಕಕ್ಕೆ ಅನುಮತಿ ಕೇಳಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಮನವಿ ಮಾಡಿದ್ದರು. ಅವಕಾಶ ಸಿಗದ ಬೆನ್ನಲ್ಲೇ ಇದು ಕೂಡಾ ವಿವಾದವಾಗಿತ್ತು.

ವಲಸೆ ಕಾರ್ಮಿಕರ ಬಳಿಕ ಬಡವರ ಪರ ಧ್ವನಿ ಎತ್ತಿರುವ ಕಾಂಗ್ರೆಸ್ ಈಗ ಆನ್‍ಲೈನ್ ಅಭಿಯಾನದ ಮೂಲಕ ಹತ್ತು ಸಾವಿರ ಹಣದ ನೆರವು ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದು ಕೊರೊನಾ ಸಂಕಷ್ಟ ವೇಳೆ ರಾಜಕೀಯ ನುಸುಳಲು ಆರಂಭಿಸಿದೆ.

Comments

Leave a Reply

Your email address will not be published. Required fields are marked *