ಬಂಧಿಸಲು ಹೋದಾಗ ಡ್ಯಾಗರ್‌ನಿಂದ ಪೇದೆ ಮೇಲೆ ಹಲ್ಲೆ- ರೌಡಿಶೀಟರ್ ಕಾಲಿಗೆ ಗುಂಡೇಟು

– ಬೆಂಗಳೂರಲ್ಲಿ 2 ಕಡೆ ಗುಂಡಿನ ಸದ್ದು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎರಡು ಕಡೆ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹೊಡೆದಿದ್ದಾರೆ. ಒಂದು ಘಟನೆ ಬೆಂಗಳೂರಿನ ಕೋಣನಕುಂಟೆ ವ್ಯಾಪ್ತಿಯ ನಾರಾಯಣ ನಗರದಲ್ಲಾದರೆ, ಇನ್ನೊಂದು ಬ್ಯಾಡರಹಳ್ಳಿ ಬಳಿಯ ಬ್ರಹ್ಮದೇವ ಬಳಿ ನಡೆದಿದೆ.

ಕೋಣನಕುಂಟೆಯಲ್ಲಿ ರೌಡಿಶೀಟರ್ ಮಂಜ ಅಲಿಯಾಸ್ ಬೊಂಡ ಮಂಜನ ಕಾಲಿಗೆ ಸಿಸಿಬಿ ಇನ್ಸ್ ಪೆಕ್ಟರ್ ಪುನೀತ್ ಕುಮಾರ್ ಫೈರಿಂಗ್ ಮಾಡಿದ್ದಾರೆ. ಮಂಜ ಅಲಿಯಾಸ್ ಬೊಂಡ ಮಂಜ ತಲಘಟ್ಟಪುರ ಠಾಣೆ ರೌಡಿಶೀಟರ್ ಆಗಿದ್ದ. ಆರೋಪಿ ವಿರುದ್ಧ ಬರೋಬ್ಬರಿ 23 ಪ್ರಕರಣಗಳು ದಾಖಲಾಗಿದ್ದವು.

ಕಳೆದ ಒಂದು ತಿಂಗಳಿನಿಂದ ಆರೋಪಿ ಪತ್ತೆಗಾಗಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು. ಇದೀಗ ಕೋಣನಕುಂಟೆಯಲ್ಲಿ ಆರೋಪಿ ಇರುವ ಬಗ್ಗೆ ಇಂದು ಖಚಿತ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್ ಪುನೀತ್ ಮತ್ತು ತಂಡ ಆರೋಪಿಯನ್ನು ಬಂಧಿಸಲು ತೆರಳಿತ್ತು.

ಈ ವೇಳೆ ಬೈಕಿನಲ್ಲಿ ನಾರಾಯಣನಗರ ಬಳಿ ಪರಾರಿಯಾಗುತ್ತಿದ್ದಾಗ ಪೊಲೀಸರು ಅಡ್ಡಗಟ್ಟಿದ್ದಾರೆ. ಆಗ ರೌಡಿಶೀಟರ್ ಏಕಾಏಕಿ ಸಿಸಿಬಿ ಮುಖ್ಯಪೇದೆ ನಾಗರಾಜ್ ಕೈಗೆ ಡ್ರ್ಯಾಗರ್ ನಿಂದ ಹಲ್ಲೆ ಮಾಡಿದ್ದಾನೆ. ಹೀಗಾಗಿ ಆತ್ಮರಕ್ಷಣೆಗಾಗಿ ಇನ್ಸ್‍ಪೆಕ್ಟರ್ ರೌಡಿ ಬೊಂಡ ಮಂಜನ ಮೇಲೆ ಫೈರ್ ಮಾಡಿದ್ದಾರೆ. ಗಾಯಾಳು ಹೆಚ್ ಸಿ ನಾಗರಾಜ್ ಮತ್ತು ರೌಡಿಶೀಟರ್ ಮಂಜ ಸ್ಥಳೀಯ ಆಸ್ಪತ್ರೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಮತ್ತೊಬ್ಬ ಆರೋಪಿಯ ಮೇಲೆ ಫೈರಿಂಗ್ ನಡೆದಿದ್ದು, ವಿಶ್ವ ಅಲಿಯಾಸ್ ಸೈಕೋ ಗುಂಡೇಟು ತಿಂದ ಕೊಲೆ ಆರೋಪಿ. ಈ ಘಟನೆ ಬ್ಯಾಡರಹಳ್ಳಿ ಬಳಿಯ ಬ್ರಹ್ಮದೇವ ಬಳಿ ನಡೆದಿದೆ. ಕೊಲೆ ಆರೋಪಿ ವಿಶ್ವನನ್ನು ಸೆರೆಹಿಡಿಯಲು ಹೋದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಪೇದೆ ಮಂಜುನಾಥ್ ಮೇಲೆ ಡ್ರ್ಯಾಗರ್ ನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದ. ಈ ವೇಳೆ ಕಾಮಾಕ್ಷಿ ಪಾಳ್ಯ ಇನ್ಸ್ ಪೆಕ್ಟರ್ ವಿಶ್ವ ನ ಮೇಲೆ ಫೈರಿಂಗ್ ಮಾಡಿದ್ದಾರೆ. ವಿಶ್ವ 11 ಪ್ರಕರಣದಲ್ಲಿ ಪೊಲಿಸರಿಗೆ ಬೇಕಾಗಿದ್ದನು.

Comments

Leave a Reply

Your email address will not be published. Required fields are marked *