ಕೇರಳ ಲಾಟರಿಯಿಂದ ಕೋಟಿ ಗೆದ್ದ ಮಂಡ್ಯ ಯುವಕ

ಮಂಡ್ಯ: ಅದೃಷ್ಟ ಅನ್ನೋದು ಯಾರಿಗೆ, ಯಾವಾಗ, ಯಾವ ರೀತಿ ಒಲಿದು ಬರುತ್ತದೆ ಎಂದು ಯಾರಿಗೂ ಗೋತ್ತಿಲ್ಲ. ಇದೀಗ ಅಂಥದ್ದೇ ಅದೃಷ್ಟ ಸಕ್ಕರೆ ನಾಡು ಮಂಡ್ಯದ ಯುವಕನಿಗೆ ಒಲಿಯುವ ಮೂಲಕ ಒಂದು ಕೋಟಿ ರೂಪಾಯಿ ಲಾಟರಿಯಿಂದ ಬಂದಿದೆ.

ಕರುನಾಡಿನಲ್ಲಿ ಸದ್ಯ ಲಾಟರಿ ಬ್ಯಾನ್ ಆಗಿ ವರ್ಷಗಳೇ ಕಳೆದಿವೆ. ಇಂತಹ ಸಂದರ್ಭದಲ್ಲಿ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಬಲರಾಮ್ ಎಂಬ ಉದ್ಯಮಿಯ ಮಗ ಶೋಹಾನ್ ಲಾಟರಿಯಿಂದ ಒಂದು ಕೋಟಿ ಬಹುಮಾನ ಪಡೆದು ಎಲ್ಲರನ್ನು ನಿಬ್ಬೇರಗು ಮಾಡಿದ್ದಾನೆ. ಕಳೆದ ಭಾನುವಾರ ಸ್ನೇಹಿತನ ಮದುವೆಗೆ ಶೋಹಾನ್ ಮತ್ತು ಕುಟುಂಬದವರು ಕೇರಳದ ಪುತ್ತನ್‍ತಾಳಿಗೆ ಹೋದಾಗ ಈ ಯುವಕ ಭಾಗ್ಯಮತಿ ಲಾಟರಿ ಖರೀದಿ ಮಾಡಿದ ಲಾಟರಿಯಿಂದ ಒಂದು ಕೋಟಿಯ ಅದೃಷ್ಟ ಲಕ್ಷ್ಮಿ ಒಲಿದು ಬಂದಿದ್ದಾಳೆ.

ಕೇರಳದಲ್ಲಿ ಭಾಗ್ಯಮತಿ ಬಂಪರ್ ಲಾಟರಿ 48 ಲಕ್ಷ ಟಿಕೆಟ್‍ಗಳು ಸೇಲ್ ಆಗಿದ್ದು, ಆ ಪೈಕಿ ಶೋಹಾನ್‍ಗೆ ಅದೃಷ್ಟ ಲಕ್ಷ್ಮಿ ಒಲಿದು ಬಂದಿದ್ದಾಳೆ. ಮದುವೆ ಕಾರಣಕ್ಕೆ ಶೋಹಾನ್ ಕುಟುಂಬ ಭಾನುವಾರ ಕೇರಳದ ಪುತ್ತನ್‍ತಾಳಿಗೆ ಹೋದ ವೇಳೆ ಅಲ್ಲಿದ್ದ ಇವರ ಸ್ನೇಹಿತ ದೇವದಾಸ್ ಎಂಬವರು ತಮ್ಮ ಲಾಟರಿ ಅಂಗಡಿಯನ್ನು ನೋಡಿ ಬನ್ನಿ ಎಂದು ಅಂಗಡಿಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ದೇವದಾಸ್ ಅವರು ಸರ್ ನಿಮಗೆ ಅದೃಷ್ಟ ಇರುವ ಹಾಗೆ ಕಾಣುತ್ತಿದೆ ಒಂದು ಟಿಕೆಟ್ ತೆಗೆದುಕೊಳ್ಳಿ ಎಂದು ಶೋಹಾನ್‍ಗೆ ಹೇಳಿದ್ದಾರೆ. ಈ ವೇಳೆ ಶೋಹಾನ್ 100 ರೂಪಾಯಿ ನೀಡಿ ಒಂದು ಭಾಗ್ಯಮತಿ ಬಂಪರ್ ಲಾಟರಿ ಟಿಕೇಟ್‍ನ್ನು ಖರೀದಿ ಮಾಡಿದ್ದಾರೆ. ಬಳಿಕ ಬಂದಿದ್ದ ಮದುವೆಗೆ ಹೋಗಿ ಸೋಮವಾರ ಮದುವೆ ಮುಗಿಸುತ್ತಾರೆ. ಸೋಮವಾರ ಸಂಜೆ ದೇವದಾಸ್ ಕರೆ ಮಾಡಿ ಸರ್ ನಮ್ಮ ಅಂಗಡಿಗೆ ಲಾಟರಿ ಬಂದಿದೆ, ನಿಮ್ಮ ಟಿಕೆಟ್ ನಂಬರ್ ನೋಡಿ ಎಂದಿದ್ದಾರೆ. ಆ ವೇಳೆ ಟಿಕೆಟ್ ನೋಡಿದಾಗ ಒಂದು ಕೋಟಿ ಬಂಪರ್ ಲಾಟರಿ ಹೊಡೆದಿರುವುದು ಖಾತ್ರಿಯಾಗಿದೆ. ಇದೀಗ ಲಾಟರಿಯಿಂದ ಒಂದು ಕೋಟಿ ಬಂದಿರುವುದು ಶೋಹಾನ್ ಮನೆಯವರಲ್ಲಿ ಸಂತಸ ಮನೆ ಮಾಡಿದೆ.

ಮದುವೆ ಹಾಗೂ ಟೂರ್ ಪ್ಲಾನ್ ಹಾಕಿಕೊಂಡು ಕೇರಳಗೆ ಹೋಗಿದ್ದ ಕುಟುಂಬಕ್ಕೆ ಲಾಟರಿಯ ಮೂಲಕ ಒಂದು ಕೋಟಿ ಬಂದಿರುವುದು ಸಂತಸಕ್ಕೆ ಕಾರಣವಾಗಿದೆ.

Comments

Leave a Reply

Your email address will not be published. Required fields are marked *