ಫಾಸ್ಟ್ ಟ್ಯಾಗ್ ಕಿರಿಕ್ – ಟೋಲ್ ಸಿಬ್ಬಂದಿ, ಚಾಲಕನ ನಡುವೆ ಕಲಹ

– ಸಿಬ್ಬಂದಿಯಿಂದ ಹಲ್ಲೆ ಆರೋಪ

ಬೆಂಗಳೂರು/ನೆಲಮಂಗಲ: ಕಾರಿನಲ್ಲಿ ಆರೋಗ್ಯ ಏರುಪೇರಾಗಿದ್ದ ವೃದ್ಧೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಕಾರು ಚಾಲಕನೊಂದಿಗೆ ಟೋಲ್ ಸಿಬ್ಬಂದಿ ಗೂಂಡಾಗಿರಿ ಮಾಡಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿಯ ಟೋಲ್ ಬಳಿ ಈ ಘಟನೆ ನಡೆದಿದ್ದು, ಫಾಸ್ಟ್ ಟ್ಯಾಗ್ ಇಲ್ಲ ಹಣ ಕಟ್ಟುವೆ ತುರ್ತಾಗಿ ಆಸ್ಪತ್ರೆಗೆ ತೆರಳಬೇಕಿದೆ ಎಂದ, ಕಾರು ಚಾಲಕನಿಗೆ ಟೋಲ್ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎಂದು ಹೆಸರುಘಟ್ಟ ನಿವಾಸಿ ಕಾರು ಚಾಲಕ ರೋಹಿತ್ ಆರೋಪಿಸಿದ್ದಾರೆ.

ನೆಲಮಂಗಲ ಕುಣಿಗಲ್ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಟೋಲ್ ಇದಾಗಿದ್ದು, ವೃದ್ಧೆಗೆ ಆರೋಗ್ಯ ಸರಿ ಇರಲಿಲ್ಲ. ಹಾಗಾಗಿ ಆಸ್ಪತ್ರೆಗೆ ಹೋಗುತ್ತಿದ್ದೇವೆ ಎಂದಾಗ ಕನಿಷ್ಠ ಪಕ್ಷ ಮಾನವೀಯತೆ ತೋರದೆ ಟೋಲ್ ಸಿಬ್ಬಂದಿಯಿಂದ ಹಲ್ಲೆ ಹಾಗೂ ನಿಂದನೆ ಆರೋಪದ ಘಟನೆ ಖಂಡಿಸಿ ಸ್ಥಳೀಯರು ಟೋಲ್ ಮುತ್ತಿಗೆ ಹಾಕಿ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡರು.

ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಫಾಸ್ಟ್ ಟ್ಯಾಗ್ ಜಾರಿಗೆ ಬಂದಾಗಿನಿಂದ ಒಂದಲ್ಲ ಒಂದು ಪ್ರತಿನಿತ್ಯ ಗಲಾಟೆಗಳು ನಡೆಯುತ್ತಲೇ ಇದೆ. ಫಾಸ್ಟ್ ಟ್ಯಾಗ್ ಜಾರಿಗೆ ಬಂದಿರುವುದು ನಿಜ ಆದರೆ ಕೆಲವೊಮ್ಮೆ ನಿಯಮಗಳಿಗಿಂತ ಮಾನವೀಯತೆ ಮುಖ್ಯವಾಗಿರಬೇಕೆಂಬುದನ್ನು ಟೋಲ್ ಸಿಬ್ಬಂದಿ ಅರಿಯಬೇಕಿದೆ ಎಂದು ವಾಹನ ಸವಾರರು ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *