ಪ್ರೇಮಕವಿ ದಾಂಪತ್ಯದಲ್ಲಿ ಬಿರುಕು ಪ್ರಕರಣಕ್ಕೆ ಟ್ವಿಸ್ಟ್ – ಮಾಟ ಮಂತ್ರದ ವಸ್ತುಗಳು ಜಪ್ತಿ

ಬೆಳಗಾವಿ: ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರು ವಶಕ್ಕೆ ಪಡೆದಿರುವ ಶಿವಾನಂದ ವಾಲಿ ಬಾಡಿಗೆ ಮನೆಯಲ್ಲಿ ಮಾಟ ಮಂತ್ರದ ವಸ್ತುಗಳು ಪತ್ತೆಯಾಗಿವೆ. ಇದನ್ನೂ ಓದಿ: ಚಿತ್ರಸಾಹಿತಿ ಕೆ. ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು!

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಡಗಿ ಗ್ರಾಮ ಶಿವಾನಂದ ವಾಲಿ ವಿರುದ್ಧ ಮಾಟ ಮಂತ್ರ ಮಾಡುತ್ತಿದ್ದ ಆರೋಪ ಕೇಳಿ ಬಂದಿತ್ತು. ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಕುಟುಂಬಕ್ಕೆ ಶಿವಾನಂದ ವಾಲಿ ಆಪ್ತನಾಗಿದ್ದು, ಈತನ ವಿರುದ್ಧ ಕೆ.ಕಲ್ಯಾಣ್ ಅಪಹರಣದ ಆರೋಪ ಮಾಡಿದ್ದಾರೆ. ಹೀಗಾಗಿ ಪೊಲೀಸರು ಆತನ ಮನೆಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾಟ, ಮಂತ್ರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿದ್ದು, ಪೊಲೀಸರು ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕೆ.ಕಲ್ಯಾಣ್ ಆರೋಪ:
ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಉಂಟಾದ ಕಲಹ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಮ್ಮ ಪತ್ನಿ ಅಶ್ವಿನಿ ಹಾಗೂ ಅತ್ತೆ, ಮಾವರನ್ನು ತಮ್ಮ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಮೂಲದ ಗಂಗಾ ಕುಲಕರ್ಣಿ ಹಾಗೂ ಶಿವಾನಂದ ವಾಲಿ ಪುಸಲಾಯಿಸಿ ಅಪಹರಣ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪತ್ನಿ, ಅತ್ತೆ, ಮಾವನ ಅಕೌಂಟ್‍ನಿಂದ ಶಿವಾನಂದ ವಾಲಿ ತನ್ನ ಅಕೌಂಟ್‍ಗೆ 19.80ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಜೊತೆಗೆ ಜಾಯಿಂಟ್ ಪ್ರಾಪರ್ಟಿಯನ್ನು ಶಿವಾನಂದ ವಾಲಿ ತನ್ನ ಹೆಸರಿಗೆ ಖರೀದಿ ಮಾಡಿಕೊಂಡಿದ್ದಾನೆ ಎಂದು ಕೆ.ಕಲ್ಯಾಣ್ ಸೆಪ್ಟೆಂಬರ್ 30ರಂದು ಮಾಳಮಾರುತಿ ಠಾಣೆಗೆ ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ.

ಕೆ.ಕಲ್ಯಾಣ್ ದೂರಿನ ಮೇರೆಗೆ ಆರೋಪಿ ಶಿವಾನಂದ ವಾಲಿಯನ್ನು ಬೀಳಗಿ ಪೊಲೀಸರು ವಶಕ್ಕೆ ಪಡೆದಿದ್ದರು. ಶನಿವಾರ ಬೀಳಗಿ ಪೊಲೀಸರು ಮಾಳಮಾರುತಿ ಠಾಣೆಗೆ ಶಿವಾನಂದನನ್ನು ಹಸ್ತಾಂತರಿಸಿದ್ದಾರೆ. ಸದ್ಯಕ್ಕೆ ಶಿವಾನಂದ ವಾಲಿ ಮಾಳಮಾರುತಿ ಠಾಣೆ ಪೊಲೀಸರ ವಶದಲ್ಲಿದ್ದಾನೆ. ಶಿವಾನಂದ ವಾಲಿ ಬಳಿ ಮಾಟ ಮಂತ್ರಕ್ಕೆ ಬಳಸುವ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮಾಟ, ಮಂತ್ರ ವಸ್ತುಗಳು ಪತ್ತೆ ಹಿನ್ನೆಲೆ ಪ್ರಕರಣ ಬಗ್ಗೆ ತೀವ್ರ ಕುತೂಹಲ ಉಂಟಾಗಿದೆ.

Comments

Leave a Reply

Your email address will not be published. Required fields are marked *