ಪ್ರೀತಿಸಿದ್ದು ನಿಜ, ಬ್ರೇಕಪ್ ಬಳಿಕ ಬಲವಂತವಾಗಿ ತಾಳಿ ಕಟ್ಟಿದ: ಯುವತಿ

ಹಾಸನ : ನನಗೆ ಅನ್ಯಾಯವಾಗಿದೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ತನಗೆ ಬಲವಂತವಾಗಿ ತಾಳಿ ಕಟ್ಟಿದ ಯುವಕನ ವಿರುದ್ಧ ಯುವತಿ ಆಕ್ರೋಶ ಹೊರಹಾಕಿದ್ದಾಳೆ.

ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದಲ್ಲಿ ಜನವರಿ 21 ರಂದು ಯುವತಿಯೊಬ್ಬಳಿಗೆ ಸತೀಶ್ ಎಂಬ ಯುವಕ ಬಲವಂತವಾಗಿ ತಾಳಿ ಕಟ್ಟಿ ನಾವಿಬ್ಬರು ಪ್ರೀತಿ ಮಾಡಿದ್ದು ಮದುವೆಯಾಗಿದ್ದೇವೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಇದರಿಂದ ಜನವರಿ 25ರಂದು ನಡೆಯಬೇಕಿದ್ದ ಯುವತಿ ಮದುವೆ ನಿಂತು ಹೋಗಿತ್ತು.

ಇದೀಗ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುವತಿ, ನಾನು ಅಣ್ಣನೊಂದಿಗೆ ಅಜ್ಜಿ ಮನೆಗೆ ತೆರಳಿದ್ದೆ. ಈ ವೇಳೆ ಹದಿನೈದು ಮಂದಿ ನನ್ನ ಮನೆಗೆ ಬಂದಿದ್ದಾರೆ. ಅಮ್ಮ ಫೋನ್ ಮಾಡಿ ವಿಷಯ ತಿಳಿಸಿದಾಗ ಮನೆಗೆ ಬಂದೆ. ನನ್ನ ತಾಯಿ ಬಳಿ ನಿನ್ನ ಮಗಳನ್ನು ಲವ್ ಮಾಡುತ್ತಿದ್ದೇನೆ ಮದುವೆ ಮಾಡಿಕೊಡಿ ಎಂದು ಕೇಳಿದರು. ನನ್ನ ತಾಯಿ ನಿನಗೆ ಮದುವೆ ಇಷ್ಟ ಇದಿಯಾ ಎಂದರು. ನನಗೆ ಇವನ ಜೊತೆ ಮದುವೆ ಇಷ್ಟ ಇಲ್ಲ ಎಂದು ಹೇಳಿದೆ. ಈ ವೇಳೆ ಬಲವಂತವಾಗಿ ತಾಳಿಕಟ್ಟಲು ಮುಂದಾದಾಗ ಎರಡು ಬಾರಿ ತಾಳಿ ಕಿತ್ತೆಸೆದೆ. ನಂತರ ನನ್ನ ಎರಡು ಕೈಗಳನ್ನು ಹಿಡಿದುಕೊಂಡು ಎಲ್ಲರೂ ಸೇರಿ ಬಲವಂತವಾಗಿ ಅರಿಶಿನಕೊಂಬು ಕಟ್ಟಿಸಿದರು ಎಂದು ಯುವತಿ ಹೇಳಿದ್ದಾಳೆ.

ಕಿರುಚಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದರು. ನಂತರ ನನ್ನನ್ನು ಕುಶಾಲನಗರ ಬಳಿಯಿರುವ ಹೋಂ ಸ್ಟೆಯಲ್ಲಿ ಇಟ್ಟು ಕಿರುಕುಳ ನೀಡಿದ್ದಾರೆ. ಇದೀಗ ನನಗೆ ನಿಶ್ಚಿಯವಾಗಿದ್ದ ಮದುವೆ ಮುರಿದು ಬಿದ್ದಿದ್ದು, ಆ ಹುಡುಗನಿಗೆ ಬೇರೆ ಯುವತಿಯೊಂದಿಗೆ ಮದುವೆಯಾಗಿದೆ. ನನಗಾದಂತೆ ಯಾವ ಯುವತಿಗೂ ಆಗಬಾರದು ಎಲ್ಲರಿಗೂ ಶಿಕ್ಷೆಯಾಗಬೇಕೆಂದು ಯುವತಿ ಒತ್ತಾಯಿಸಿದ್ದಾಳೆ.

ಇನ್ನು ತಮ್ಮಿಬ್ಬರ ಪ್ರೀತಿಯ ಬಗ್ಗೆಯೂ ಮಾತನಾಡಿರುವ ಯುವತಿ, ನಾಲ್ಕು ವರ್ಷದ ಹಿಂದೆ ಸತೀಶ್ ನಾನು ಪ್ರೀತಿಸುತ್ತಿದ್ದೆವು. ಸತೀಶ್ ಕಿರುಕುಳ ನೀಡುತ್ತಿದ್ದರಿಂದ ಬ್ರೇಕಪ್ ಆಗಿತ್ತು ಎಂದು ತಿಳಿಸಿದ್ದಾಳೆ.

Comments

Leave a Reply

Your email address will not be published. Required fields are marked *