ಪ್ರತಿ ತಾಲೂಕಿನಲ್ಲೂ ಗೋಶಾಲೆ ಸ್ಥಾಪನೆ, ಗೋಮಾಳಕ್ಕೆ ಜಾಗ: ಪ್ರಭು ಚೌವ್ಹಾಣ್

ಹಾಸನ: ರಾಜ್ಯದಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದ್ದು, ವಿಧಾನ ಪರಿಷತ್ ನಲ್ಲಿ ಮಸೂದೆ ಮಂಡಿಸಿ ಬಹುಮತ ಪಡೆಯುತ್ತೇನೆ ಎಂದು ಪಶುಸಂಗೋಪನೆ ಸಚಿವ ಫ್ರಭುಚೌವ್ಹಾಣ್ ಹೇಳಿದ್ದಾರೆ.

ನಗರದ ಪಶುವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಗೋಮಾತೆ ನಮ್ಮ ಮಾತೆ ಇದ್ದಹಾಗೆ ಅವುಗಳ ರಕ್ಷಣೆಯಾಗಬೇಕು, ಕಸಾಯಿಖಾನೆಗೆ ಹೋಗಬಾರದು, ಗೋಹತ್ಯೆ ಆಗಬಾರದು. ಗೋವುಗಳ ಕಳ್ಳ ಸಾಗಣೆ ಮಾಡಿದರೆ ಅಂತಹವರ ವಿರುದ್ಧ ಎಫ್‍ಐಆರ್ ದಾಖಲಿಸಲು ಎಸ್‍ಪಿ ಸೂಚಿಸಿದ್ದೇನೆ. ಗೋಹತ್ಯೆ ಮಾಡಿದರೆ ಐವತ್ತರಿಂದ ಒಂದು ಲಕ್ಷದವರೆಗೆ ದಂಡ, ಎರಡನೇ ಬಾರಿ ಮಾಡಿದರೆ ಹತ್ತು ಲಕ್ಷದವರೆಗೂ ದಂಡ ವಿಧಿಸಲಾಗುವುದು. ಗೋವು ಹತ್ಯೆ ಮಾಡಿದರೆ ಮೂರು ವರ್ಷ ಜೈಲು ಶಿಕ್ಷೆ ಇತ್ತು ಈಗ ಏಳು ವರ್ಷಕ್ಕೆ ಏರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗೋಮಾತೆ ರಕ್ಷಣೆಯೇ ನಮ್ಮ ಗುರಿಯಾಗಿದ್ದು, ಎಲ್ಲ ಜಿಲ್ಲೆಯ ಡಿಸಿ, ಎಸ್‍ಪಿ ಗಳಿಗೆ ಸೂಚಿಸಿದ್ದೇನೆ. ಗುಜರಾತ್, ಉತ್ತರಪ್ರದೇಶ ಪ್ರವಾಸ ಮಾಡಿದ್ದೇನೆ. ಪ್ರತಿ ತಾಲೂಕಿನಲ್ಲೂ ಗೋಶಾಲೆ ಸ್ಥಾಪಿಸಲಾಗುವುದು, ಗೋಮಾಳಕ್ಕೆ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಮಾರಾಟವಾಗದ ಕರುಗಳನ್ನು ಗೋಶಾಲೆಗೆ ಬಿಡಲಾಗುವುದು, ಅವುಗಳಿಗೆ ಮೇವು ಹಾಗೂ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಗೋವು ಸಾಗಾಣೆ ತಡೆಗಟ್ಟುವಲ್ಲಿ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಇದೇ ವೇಳೆ ಹುತಾತ್ಮರ ದಿನಾಚರಣೆ ಪ್ರಯುಕ್ತ 11 ಗಂಟೆಗೆ ಪಶುವೈದ್ಯಕೀಯ ಕಾಲೇಜಿನಲ್ಲೇ ಮೌನಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಪ್ರೀತಂಗೌಡ ಹಾಜರಿದ್ದರು.

Comments

Leave a Reply

Your email address will not be published. Required fields are marked *