ಪೋಷಕರ ವಿರುದ್ಧ ಮದ್ವೆ ಆಗಲ್ಲ ಎಂದ ಪ್ರಿಯಕರ- ಯುವತಿ ಆತ್ಮಹತ್ಯೆ

– ನಾಲ್ಕು ವರ್ಷದ ಪ್ರೀತಿ ಸಾವಿನಲ್ಲಿ ಅಂತ್ಯ

ಚೆನ್ನೈ: ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಿರುಥನಿ ಬಳಿಯ ನಲ್ಲಾಟೂರು ಗ್ರಾಮದ ನಿವಾಸಿ ಮಣಿಮೇಘಲೈ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೃತ ಮಣಿ ಮೇಘಲೈ ಪ್ರಿಯಕರ ರಾಜ್‍ಕುಮಾರ್, ಮನೆಯ ವಿರೋಧವಾಗಿ ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ಇದರಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಣಿ ಮತ್ತು ರಾಜ್‍ಕುಮಾರ್ ಪರಸ್ಪರ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ರಾಜ್‍ಕುಮಾರ್ ಖಾಸಗಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದನು. ಇವರಿಬ್ಬರ ಪ್ರೀತಿ ವಿಚಾರ ಮನೆಯಲ್ಲಿ ಗೊತ್ತಾಗಿದೆ. ಆಗ ಎರಡು ಮನೆಯವರು ಬೇರೆ ಬೇರೆ ಜಾತಿ ಎಂದು ಇವರ ಮದುವೆಯನ್ನು ನಿರಾಕರಿಸಿದ್ದಾರೆ.

ಈ ವೇಳೆ ಎಲ್ಲಿಯಾದರೂ ಹೋಗಿ ಮದುವೆಯಾಗೋಣ ಎಂದು ಮಣಿ ಪ್ರಿಯಕರನಿಗೆ ಒತ್ತಡ ಹಾಕಿದ್ದಾಳೆ. ಆದರೆ ರಾಜ್‍ಕುಮಾರ್, ನಾನು ನನ್ನ ಕುಟುಂಬವನ್ನು ಬಿಟ್ಟು ಬರಲು ಸಾಧ್ಯವಿಲ್ಲ. ಅಲ್ಲದೇ ಪೋಷಕರ ವಿರುದ್ಧ ನಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ಇದರಿಂದ ನೊಂದ ಮಣಿ ಶನಿವಾರ ಬೆಳಗ್ಗೆ ತಮ್ಮ ಮನೆಯಲ್ಲಿಯೇ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *