ಪೊಲೀಸ್ ಇಲಾಖೆಯಲ್ಲಿ ಕೆಲ ಅಧಿಕಾರಿಗಳು ಕಳ್ಳರಿದ್ದಾರೆ: ಅಪ್ಪಚ್ಚು ರಂಜನ್

ಮಡಿಕೇರಿ: ಕೊಡಗಿನಲ್ಲಿ ಗಾಂಜಾ ಮಾರಾಟ ದಂಧೆ ಹೊಸದೇನು ಅಲ್ಲ. ಹಿಂದಿನಿಂದಲೂ ಗಾಂಜಾ ಮಾರಾಟ ತುಂಬಾ ಇದೆ. ಆದರೆ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಕಳ್ಳರಿದ್ದಾರೆ. ಅವರು ಗಾಂಜಾ ಮಾರಾಟಗಾರರಿಂದ ಮಾಮೂಲು ಪಡೆದು ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪೊಲೀಸ್ ಇಲಾಖೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಗಾಂಜಾ ಮಾರಾಟ ಕೊಡಗಿನಲ್ಲಿ ಹೊಸದೇನು ಅಲ್ಲ. ಪೊಲೀಸರು ಮಾತ್ರ ಸುಮ್ಮನಾಗಿದ್ದು ಏಕೆ?, ಈಗ ಒಂದೇ ಬಾರಿ ಎಲ್ಲವನ್ನೂ ಹಿಡಿಯುತ್ತೇವೆ ಎಂದರೆ ಹೇಗೆ?, ಪೊಲೀಸರು ಹಿಂದಿನಿಂದ ರೇಡ್ ಮಾಡುತ್ತಿದ್ದ ಗಾಂಜಾ ಪ್ರಕರಣಗಳ ಆರೋಪಿಗಳಿಂದ ಮಾಮೂಲು ಪಡೆದು ಕೇಸ್ ಮುಚ್ಚಿ ಹಾಕುತ್ತಿದ್ದರು. ಅದು ಈಗ ನನ್ನ ಗಮನಕ್ಕೆ ಬಂದಿದೆ. ಆದರೆ ರಾಜ್ಯ ಸರ್ಕಾರ ಇದೆಲ್ಲವನ್ನೂ ಸುಮ್ಮನೇ ಬಿಡುವುದಿಲ್ಲ. ವಿರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರಗಳಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ ಎಂದರು.

ಇದನ್ನು ಸರ್ಕಾರ ಮಟ್ಟಹಾಕುತ್ತದೆ. ಯಾರೆಲ್ಲಾ ಗಾಂಜಾ ಮಾರಾಟ ಅಥವಾ ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೋ ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ಹಾಕಿ ಜೈಲಿಗೆ ಕಳುಹಿಸಬೇಕು. ಇಲ್ಲದಿದ್ದರೆ ಅವರ್ಯಾರಿಗೂ ಬುದ್ಧಿ ಬರುವುದಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ತಲೆ ಮೇಲೆ ಹೊಡೆದರೆ ಕೆಳಗಿನವರೆಗೆ ಅದು ಟಚ್ ಆಗುತ್ತದೆ. ಹಾಗೇ ಸರ್ಕಾರ ಎಲ್ಲಿಗೆ ಹೊಡೆಯಬೇಕೋ ಅಲ್ಲಿಗೆ ಹೊಡೆದು ಎಲ್ಲವನ್ನು ಮಟ್ಟಹಾಕಲಿದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *