ಪೊಲೀಸರ ನರಹತ್ಯೆಗೈದ ಹಂತಕನ ಮನೆ ಉಡೀಸ್- ಐಷಾರಾಮಿ ಕಾರುಗಳು ಜಖಂ

– ವಿಕಾಸ್ ದುಬೆ ಸುಳಿವು ನೀಡಿದವರೆಗೆ 50 ಸಾವಿರ ಬಹುಮಾನ

ಲಕ್ನೋ: ಉತ್ತರ ಪ್ರದೇಶದಲ್ಲಿ ಎಂಟು ಪೊಲೀಸರನ್ನು ಗುಂಡಿದ ದಾಳಿ ಮಾಡಿ ಹತ್ಯೆ ಮಾಡಿದ್ದ ಗ್ಯಾಂಗ್‍ಸ್ಟಾರ್ ವಿಕಾಸ್ ದುಬೆ ಮನೆಯನ್ನು ಜಿಲ್ಲಾಡಳಿತ ಕೆಡವಿ ಹಾಕಿದೆ.

ಕೊಲೆ ಪ್ರಕರಣದ ಆರೋಪದ ಮೇಲೆ ವಿಕಾಸ್ ದುಬೆಯನ್ನು ಅರೆಸ್ಟ್ ಮಾಡಲು ಹೋದ ಎಂಟು ಪೊಲೀಸರನ್ನು ಗುರುವಾರ ಗುಂಡಿಕ್ಕಿ ಕೊಲ್ಲಲಾಗಿತ್ತು. ಓರ್ವ ಡಿವೈಎಸ್ಪಿ, ಮೂವರು ಸಬ್ ಇನ್‍ಸ್ಪೆಕ್ಟರ್ ಗಳು ಹಾಗೂ ನಾಲ್ಕು ಮಂದಿ ಕಾನ್ಸ್ ಸ್ಟೇಬಲ್‍ಗಳು ಸೇರಿದಂತೆ ಒಟ್ಟು ಎಂಟು ಜನ ಪೊಲೀಸರನ್ನು ಕಾನ್ಪುರದ ಡಿಕ್ರು ಗ್ರಾಮದಲ್ಲಿ ಗುರುವಾರ ರಾತ್ರಿ ಕ್ರಿಮಿನಲ್ ಗ್ಯಾಂಗ್ ಹತ್ಯೆ ಮಾಡಿತ್ತು.

ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ವಿಕಾಸ್ ದುಬೆಯನ್ನು ಪೊಲೀಸರು ಹುಡುಕುತ್ತಿದ್ದು, ಆತ ಎಸ್ಕೇಪ್ ಆಗಿದ್ದಾನೆ. ಈತ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ 150 ಕಿಮೀ ದೂರವಿರುವ ಡಿಕ್ರು ಗ್ರಾಮದಲ್ಲಿ ಇದ್ದ ವಿಕಾಸ್ ದುಬೆ ಮನೆಯನ್ನು ಜಿಲ್ಲಾಡಳಿತ ಜೆಸಿಬಿ ತೆಗದುಕೊಂಡು ಹೋಗಿ ನೆಲಸಮ ಮಾಡಿದೆ. ಜೊತೆಗೆ ಮನೆಯ ಮುಂದೆ ಇದ್ದ ಆತನ ಐಷಾರಾಮಿ ಕಾರುಗಳನ್ನು ಕೂಡ ಜಖಂ ಮಾಡಲಾಗಿದೆ. ದುಬೆ ಮನೆಯನ್ನು ಸಂಪೂರ್ಣ ನಾಶ ಮಾಡಲಾಗಿದೆ.

ಸದ್ಯ ವಿಕಾಸ್ ದುಬೆಗಾಗಿ ಇಡೀ ಉತ್ತರ ಪ್ರದೇಶದ ಪೊಲೀಸರು ಹುಡುಕುತ್ತಿದ್ದಾರೆ. ಆದರೆ ಆತ ತಪ್ಪಿಸಿಕೊಂಡಿದ್ದಾನೆ. ಸಿಎಂ ಯೋಗಿ ಆದಿತ್ಯನಾಥ್ ಅವರು ಕೂಡ ಪೊಲೀಸರನ್ನು ಕೊಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಜೊತೆಗೆ ಮೃತ ಪೊಲೀಸರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಘೋಷಿಸಿದ್ದಾರೆ. ಇತ್ತ ವಿಕಾಸ್ ದುಬೆ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಕಾನ್ಪುರದ ಪೊಲೀಸರು ಘೋಷಣೆ ಮಾಡಿದ್ದಾರೆ.

ಇಂದು ಮಗನ ಪೈಶಾಚಿಕ ಕೃತ್ಯದ ಬಗ್ಗೆ ಆಕ್ರೋಶ ವ್ಯಕ್ತಿಪಡಿಸಿರುವ ಆತನ ತಾಯಿ ಸರ್ಲಾ ದೇವಿ. ಆತ ಪೊಲೀಸರಿಗೆ ಶರಣಾಗಬೇಕು. ಅದನ್ನು ಬಿಟ್ಟು ಅವನು ಹೀಗೆ ಮೊಂಡುತನ ತೋರಿಸಿದರೆ ಅವನನ್ನು ಪೊಲೀಸರು ಎನ್‍ಕೌಂಟರ್ ಮಾಡಬೇಕು. ಅವನು ಮಾಡಿದ್ದು ತಪ್ಪು, ಅಮಾಯಕ ಪೊಲೀಸರನ್ನು ಕೊಲ್ಲಬಾರದಿತ್ತು. ಆತನನ್ನು ಹಿಡಿಯಲು ಆಗಲಿಲ್ಲ ಎಂದರೆ ಆತನನ್ನು ಗುಂಡಿಕ್ಕಿ ಕೊಂದುಬಿಡಿ ಎಂದು ಹೇಳಿದ್ದಾರೆ.

2001ರಲ್ಲಿ ವಿಕಾಸ್ ದುಬೆ ಅಂದಿನ ಬಿಜೆಪಿ ಸರ್ಕಾರದ ಕ್ಯಾಬಿನೆಟ್ ಮಿನಿಸ್ಟರ್ ಆಗಿದ್ದ ಸಂತೋಷ್ ಶುಕ್ಲಾ ಅವರನ್ನು ಪೊಲೀಸ್ ಠಾಣೆಯಲ್ಲೇ ಗುಂಡಿಕ್ಕಿ ಕೊಲೆ ಮಾಡಿದ್ದ. ನಂತರ ಗ್ಯಾಂಗ್‍ಸ್ಟಾರ್ ಆಗಿ ಬೆಳೆದ ವಿಕಾಸ್ ದುಬೆ, ಹಲವಾರು ಕೊಲೆ ಮಾಡಿ ಜೈಲುವಾಸ ಅನುಭವಿಸಿದ್ದ. ನಂತರ ಜೈಲಿನಲ್ಲಿ ಇದ್ದುಕೊಂಡೇ ನಗರ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದಿದ್ದ. ಈತನ ಮೇಲೆ ಸುಮಾರು 60 ಕ್ರಿಮಿನಲ್ ಮೊಕದ್ದಮೆಗಳು ಇವೆ.

Comments

Leave a Reply

Your email address will not be published. Required fields are marked *