ಪಾಸಿಟಿವ್ ಆಗಿದ್ದರೂ ಊರಲ್ಲಿ ಸುತ್ತಾಟ – ವ್ಯಕ್ತಿಯ ವಿರುದ್ಧ ಕೇಸ್ ದಾಖಲು

ಮಡಿಕೇರಿ: ಕೊಡಗಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಜಿಲ್ಲೆಯಲ್ಲಿ ಸೋಂಕು ದೃಢಪಟ್ಟ ವ್ಯಕ್ತಿಯೋರ್ವ ಗ್ರಾಮ ಮತ್ತು ನಗರಪ್ರದೇಶದಲ್ಲಿ ಸುತ್ತಾಡುತ್ತಿರುವುದರ ಬಗ್ಗೆ ಕೇಳಿ ಬಂದ ದೂರಿನ ಮೇರೆಗೆ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದ ನಿವಾಸಿ ಗಣೇಶ್ ಎಂಬುವವರಿಗೆ ಕಳೆದ ಒಂದು ವಾರದ ಹಿಂದೆ ಕೊರೊನಾ ಪಾಸಿಟಿವ್ ಆಗಿತ್ತು. ಬಳಿಕ ಅವರನ್ನು ಮಡಿಕೇರಿ ಸಮೀಪ ಇರುವ ನವೋದಯ ಶಾಲೆ ಕೋವಿಡ್ ಕೇರ್ ಸೆಂಟರ್ ಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗಣೇಶ್ ಕೋವಿಡ್ ಸೆಂಟರ್ ನಲ್ಲಿ ಜಗಳ ಮಾಡಿಕೊಂಡು ಹೋಂಕ್ವಾರಂಟೈನ್ ನಲ್ಲಿ ಇರುವುದಾಗಿ ಹೇಳಿ ಗ್ರಾಮಕ್ಕೆ ತೆರಳಿದ್ದರು.

ಗ್ರಾಮಕ್ಕೆ ತೆರಳಿದ ಬಳಿಕ ಗಣೇಶ್ ಅವರು ಕ್ವಾರಂಟೈನ್‍ನಲ್ಲಿ ಇರದೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಟ ನಡೆಸುತ್ತಿದ್ದರು. ಹೀಗಾಗಿ ಕಾಲೂರು ಗ್ರಾಮಸ್ಥರು ಪಂಚಾಯತಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆ ಗಾಳಿಬೀಡು ಪಂಚಾಯತಿ ಪಿಡಿಓ ಶಶಿಕಿರಣ್ ಮಡಿಕೇರಿ ಗ್ರಾಮಾಂತರ ಠಾಣೆಗೆ ಕೋವಿಡ್ ನಿಯಮ ಉಲ್ಲಂಘನೆ ಎಂದು ದೂರು ಸಲ್ಲಿಸಿದ್ದರು. ದೂರು ಬಂದ ಹಿನ್ನೆಲೆಯಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಗಣೇಶ್ ಅವರನ್ನು ಮತ್ತೆ ಕೋವಿಡ್ ಸೆಂಟರ್ ಕರೆತಂದು ಬಿಟ್ಟು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *