ಪಾರ್ಸಲ್ ಕೊಡೋದು ತಡವಾಗಿದ್ದಕ್ಕೆ ಹೋಟೆಲ್‍ಗೆ ನುಗ್ಗಿ ದಾಂಧಲೆ

ಬೆಂಗಳೂರು: ಹೋಟೆಲ್ ನಲ್ಲಿ ಊಟ ಪಾರ್ಸಲ್ ಕೊಡೋದು ತಡವಾಯಿತೆಂದು ಸಿಬ್ಬಂದಿ ಜೊತೆ ಗಲಾಟೆ ಮಾಡಿ, ದಾಂಧಲೆ ನಡೆಸಿರುವ ಘಟನೆ ನಗರದ ಅಮೃತಹಳ್ಳಿಯ ಭುವನೇಶ್ವರಿ ನಗರದಲ್ಲಿರುವ ಸೆವೆನ್ ಸ್ಟಾರ್ ಹೋಟೆಲ್ ನಲ್ಲಿ ನಡೆದಿದೆ.

ದಾಂಧಲೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಜುಲೈ 4ರಂದು ಸ್ಥಳೀಯ ಯುವಕನೊಬ್ಬ ಹೋಟೆಲ್‍ಗೆ ಬಂದು ಊಟ ಪಾರ್ಸಲ್ ಹೇಳಿದ್ದ. ಈ ವೇಳೆ ಹೋಟೆಲ್ ಸಿಬ್ಬಂದಿ ಪಾರ್ಸಲ್ ಕೊಡುವುದು ತಡವಾಗಿದೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಗಲಾಟೆ ವೇಳೆ ಸ್ಥಳೀಯ ಯುವಕ ನಾನು ಲೋಕಲ್, ನಮಗೇ ಅವಾಜ್ ಹಾಕ್ತೀಯಾ ಎಂದು ಸಿಬ್ಬಂದಿಗೆ ಬೈದಿದ್ದ. ಈ ವೇಳೆ ಹೋಟೆಲ್ ಸಿಬ್ಬಂದಿ ನೀನು ಯಾರಾದ್ರೆ ನಂಗೇನು ಎಂದು ಬೆದರಿಸಿ ಕಳುಹಿಸಿದ್ದ.

ಇದರಿಂದ ಕೋಪಗೊಂಡ ಯುವಕ, ಇದೀಗ ಹತ್ತಕ್ಕೂ ಹೆಚ್ಚು ತನ್ನ ಸ್ನೇಹಿತರನ್ನು ಕರೆಸಿ ಹೋಟೆಲ್‍ಗೆ ನುಗ್ಗಿಸಿ ದಾಂಧಲೆ ಮಾಡಿದ್ದಾರೆ. ಹೋಟೆಲ್ ಮಾಲೀಕ ಅಂಜನೇಯ ಅವರು ತಡೆಯಲು ಹೋದ ವೇಳೆ ಅವರಿಗೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಒಳಗೆ ನುಗ್ಗಿ ಚೇರ್, ಗ್ಲಾಸ್, ಸೇರಿದಂತೆ ಹೊಟೇಲ್‍ನಲ್ಲಿದ್ದ ಎಲ್ಲ ವಸ್ತುಗಳನ್ನು ಪೀಸ್ ಪೀಸ್ ಮಾಡಿ ದರ್ಪ ಮರೆದಿದ್ದಾರೆ.

ತೀವ್ರವಾಗಿ ಗಾಯಗೊಂಡ ಮಾಲೀಕ, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಅಮೃತಹಳ್ಳಿ ಪೊಲೀಸರು, ಐದಕ್ಕೂ ಹೆಚ್ಚು ಜನರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *