ಪದೇ ಪದೇ ಖಾತೆ ಬದಲಾವಣೆ ಆಡಳಿತ ದೃಷ್ಟಿಯಿಂದ ಶೋಭೆ ತರಲ್ಲ: ಶಿವರಾಮ್ ಹೆಬ್ಬಾರ್

ಕಾರವಾರ: ಪದೇ ಪದೇ ಖಾತೆ ಬದಲಾವಣೆ ಮಾಡುವುದು ಆಡಳಿತ ದೃಷ್ಟಿಯಿಂದ ಶೋಭೆ ತರುವುದಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

ಇಂದು ಕಾರವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಾತೆ ಬದಲಾವಣೆ ಮಾಡುವುದು ಮುಖ್ಯಮಂತ್ರಿ ಪರಮಾಧಿಕಾರ ಮಂತ್ರಿಮಂಡಲ ರಚನೆಯಾದಾಗ ಖಾತೆ ಹಂಚಿಕೆ ಬಗ್ಗೆ ಈ ರೀತಿಯ ಘಟನೆ ನಡೆಯುತ್ತವೆ. ಇದು ಕೇವಲ ಯಡಿಯೂರಪ್ಪ ಸರ್ಕಾರದಲ್ಲಿ ಮಾತ್ರವಲ್ಲ, ಅನೇಕ ಸರ್ಕಾರದಲ್ಲಿ ಕಂಡಿದ್ದೇವೆ. ಅದೇ ರೀತಿಯಲ್ಲಿ ನಮ್ಮ ಸರ್ಕಾರದಲ್ಲೂ ಖಾತೆ ಹಂಚಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಅನೇಕ ಸಚಿವರು ಬೇಸರ ತೋಡಿಕೊಂಡದ್ದನ್ನು ಮುಚ್ಚಿಡಲಾಗಲ್ಲ. ಮುಖ್ಯಮಂತ್ರಿ ಮತ್ತೊಂದು ಬಾರಿ ಖಾತೆ ಮರುಹಂಚಿಕೆ ಮಾಡಿ ಸಮಾಧಾನ ಮಾಡೋ ಪ್ರಯತ್ನ ಮಾಡಿದ್ದಾರೆ ಎಂದರು.

ಸಮಾಧಾನ ಆಗ್ತಾರೆ ಎಂದು ಅಂದುಕೊಂಡಿದ್ದೇನೆ. ನಾವೆಲ್ಲಾ ಒಟ್ಟಿಗೆ ಇದ್ದೇವೆ. ಆದರೆ ನಾವೆಲ್ಲ ಗುಂಪಾಗಿ ಉಳಿದಿಲ್ಲ ಎಂದ ಅವರು ನಾನು ನೂರಕ್ಕೆ ನೂರು ಆನಂದ್ ಸಿಂಗ್ ಜೊತೆಯಿದ್ದೇನೆ. ಆನಂದ್ ಸಿಂಗ್ ಮಾತ್ರವಲ್ಲ, ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳ ಎಲ್ಲರ ಜೊತೆಯಿದ್ದೇನೆ. ಆನಂದ್ ಸಿಂಗ್ ಗೆ ತಾಳ್ಮೆ ಕಳೆದುಕೊಳ್ಳಬೇಡ ಎಂದಿದ್ದೇನೆ. ಏನೂ ತೊಂದರೆ ಆಗಲ್ಲ, ಎಲ್ಲವೂ ಸರಿ ಹೋಗುತ್ತೆ. ಮುಖ್ಯಮಂತ್ರಿ ಎಲ್ಲವೂ ಸರಿಪಡಿಸ್ತಾರೆ ಎಂದು ತಿಳಿಸಿದರು.

ಇನ್ನು ಇಂದು ರೈತರ ಪ್ರತಿಭಟನೆ ಹಾಗೂ ಟ್ರಾಕ್ಟರ್ ರ‍್ಯಾಲಿ ಕುರಿತು ಅಸಮಾಧಾನ ಹೊರಹಾಕಿದ ಕಾರ್ಮಿಕ ಸಚಿವ, ಗಣರಾಜ್ಯೋತ್ಸವ ದಿನ ಈ ರೀತಿ ಟರ್ಯಾಕ್ಟರ್ ಪ್ರತಿಭಟನೆ ಮಾಡುವುದು ಸಂಘಟನೆಗೆ ಶೋಭೆ ತರುವುದಿಲ್ಲ. ರೈತರು ರಾಜಕೀಯಕರಣಕ್ಕೆ ಒಳಗಾಗಬಾರದು ಎಂದು ಹೇಳೀದರು.

Comments

Leave a Reply

Your email address will not be published. Required fields are marked *