ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದು ಕಂಬಳಿಯಲ್ಲಿ ಸುತ್ತಿ ಪತಿ ಎಸ್ಕೇಪ್!

– ದುರ್ವಾಸನೆ ಹೊಡೆಯುತ್ತಿತ್ತು ಶವ

ನವದೆಹಲಿ: ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಂದು ಆಕೆಯ ದೇಹವನ್ನು ಕಂಬಳಿಯಲ್ಲಿ ಸುತ್ತಿ ಸ್ಥಳದಿಂದ ಪರಾರಿಯಾಗಿ ಆಗಿರುವ ಭೀಕರ ಘಟನೆ ಗುರುಗ್ರಾಮ್‍ನಲ್ಲಿ ನಡೆದಿದೆ.

ಈ ದಂಪತಿ ವಾಸವಿರುವ ಮನೆಯ ಕೊಠಡಿಯಿಂದ ದುರ್ವಾಸನೆ ಬರುವುದನ್ನು ಗಮನಿಸಿದ ಮನೆಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. 5ನೇ ಸೆಕ್ಟರ್‍ನಲ್ಲಿ ಬರುವ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕೋಣೆಯ ಬೀಗ ತೆರೆದಾಗ ಮಹಿಳೆಯ ಶವ ದುರ್ವಾಸನೆ ಬೀರುತ್ತಿತ್ತು. ಶವ ಹೊದಿಕೆಯಿಂದ ಸುತ್ತಿ ಬಿದ್ದಿರುವುದು ಪತ್ತೆಯಾಗಿದೆ. ನಂತರ ಮಹಿಳೆಯ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮೃತ ಮಹಿಳೆ ಅಶೋಕ್ ವಿಹಾರ್ 3ನೇ ಹಂತದ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ಪತಿ ಭರತ್ ಥಾಪಾನೊಂದಿಗೆ ವಾಸಿಸುತ್ತಿದ್ದಳು. ಭರತ್ ನೂಡಲ್ಸ್ ಮತ್ತು ಬರ್ಗರ್ ಮಾರಾಟ ಮಾಡಿ ಜೀವನ ನಡೆಸುತ್ತಿದ್ದನು. ಮೃತ ಮಹಿಳೆ ನೇಪಾಳ ಮೂಲದ ನೈನಾ ಸುನ್ವಾರ್(35) ಎಂದು ಗುರುತಿಸಲಾಗಿದೆ.

ದಂಪತಿ ವಾಸವಿರುವ ಮನೆಯು ಕಳೆದ ನಾಲ್ಕು ದಿನಗಳಿಂದ ಬೀಗ ಹಾಕಿತ್ತು. ಕೋಣೆಯಿಂದ ದುರ್ವಾಸನೆ ಬರುತ್ತಿತ್ತು. ಅನುಮಾನದಿಂದ ಮನೆಯ ಮಾಲೀಕ ಸುಕ್ಪಾಲ್ ಇಣುಕಿ ನೋಡಿದಾಗ ಕಂಬಳಿಯೊಳಗೆ ಸುತ್ತಿ ಮಲಗಿರುವ ರೀತಿಯಲ್ಲಿ ಕಾಣುತ್ತಿತ್ತು. ಸುಕ್ಪಾಲ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದಿರುವ ಪೊಲೀಸರು ಕೋಣೆ ಬೀಗ ತೆರೆದಾಗ ಸಂತ್ರಸ್ತೆ ಶವ ಪತ್ತೆಯಾಗಿದೆ. ಆಕೆಯ ಕತ್ತು ಹಿಸುಕಿರುವ ಗುರುತುಗಳನ್ನೂ ತನಿಖಾ ತಂಡ ಗಮನಿಸಿದೆ. ಕಳೆದ ನಾಲ್ಕು ದಿನಗಳಿಂದ ದಂಪತಿ ಕೋಣೆಗೆ ಬೀಗ ಹಾಕಲಾಗಿದೆ. ಮಹಿಳೆಯ ಪತಿ ಕೂಡ ಕಾಣೆಯಾಗಿದ್ದಾನೆ ಎಂದು ತನಿಖೆಯ ವೇಳೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.

ಮಹಿಳೆ ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಮೃತ ಮಹಿಳೆಯ ಪತಿಗಾಗಿ ಹುಡುಕಾಟ ನಡೆಯುತ್ತಿದೆ. ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದು ಗುರುಗ್ರಾಮ್ ಪೊಲೀಸ್ ವಕ್ತಾರ ಸುಭಾಷ್ ಬೊಕೆನ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *