ನೆಲಮಂಗಲ ಟೋಲ್ ಬಳಿ ಬಿರು ಬಿಸಿಲಲ್ಲಿ ಬಸ್‍ಗಾಗಿ ಕಾದು ಸುಸ್ತಾದ ಪ್ರಯಾಣಿಕರು

ಬೆಂಗಳೂರು: ಮಂಗಳವಾರ ಸಂಜೆಯಿಂದ ಲಾಕ್‍ಡೌನ್ ಜಾರಿಯಾಗುವ ಹಿನ್ನೆಲೆ ಜನ ತಮ್ಮ ಊರುಗಳತ್ತ ತೆರಳುವುದರಲ್ಲಿ ನಿರತರಾಗಿದ್ದು, ಪ್ರಮುಖ ರಸ್ತೆಗಳಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇನ್ನೊಂದೆಡೆ ವಾಹನಗಳು ಇಲ್ಲದವರು ತಮ್ಮ ಊರಿಗೆ ತೆರಳಲು ದಾರಿ ಮಧ್ಯೆ ನಿಲ್ದಾಣಗಳ ಬಳಿ ಬಸ್‍ಗಾಗಿ ಕಾಯುತ್ತಿದ್ದಾರೆ. ಆದರೆ ಬಸ್‍ಗಳನ್ನು ನಿಲ್ಲಿಸುತ್ತಿಲ್ಲ. ಇದರಿಂದಾಗಿ ಸುಡು ಬಿಸಿಲಿನಲ್ಲೇ ಜನ ಕಾಯುತ್ತಿದ್ದಾರೆ.

ಇಂತಹ ದೃಶ್ಯ ನೆಲಮಂಗಲದ ಜಾಸ್ ಟೋಲ್ ಬಳಿ ಕಂಡು ಬಂದಿದ್ದು, ಬಸ್ ಗಳಿಲ್ಲದೆ ಜನರ ಪರದಾಡುತ್ತಿದ್ದಾರೆ. ಬಸ್ ಬಂದರೂ ಸಹ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿಲ್ಲ. ಹೀಗಾಗಿ ಬಿರು ಬಿಸಿಲಿನಲ್ಲಿ ಬಸ್‍ಗಳಿಗಾಗಿ ಜನ ಕಾದು ಕಾದು ಸುಸ್ತಾಗಿದ್ದಾರೆ. ಬಸ್‍ಗಳಿಗಾಗಿ ಕಾದು ಕಾದು ಮಹಿಳೆಯರು, ವೃದ್ಧರು ರಸ್ತೆಯ ಡಿವೈಡರ್ ಮೇಲೆಯೇ ಕುಳಿತರು. ಈಗಾಗಲೇ ನೆಲಮಂಗಲದ ಜಾಸ್ ಟೋಲ್ ಫ್ರೀ ಮಾಡಲಾಗಿದೆ. ಆದರೂ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ.

ಸಂಜೆಯಾದರೂ ಬೆಂಗಳೂರು ಬಿಡುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಮನೆ ಖಾಲಿ ಮಾಡಿಕೊಂಡು ಹೋಗುತ್ತಿರಿವವರೆ ಹೆಚ್ಚಿದ್ದಾರೆ. ನೆಲಮಂಗಲದ ಟೋಲ್‍ಗಳಲ್ಲಿ ಟ್ರಾಫಿಕ್ ಜಾಮ್ ತಡೆಗಟ್ಟಲು ಪೊಲೀಸರು ಟೋಲ್ ಫ್ರೀ ಮಾಡಿದ್ದಾರೆ. ಇಷ್ಟಾದರೂ ಸಹ ವಾಹನ ದಟ್ಟಣೆ ಹೆಚ್ಚಿದೆ. ಕಾರು, ಬೈಕ್, ಖಾಸಗಿ ವಾಹನದಲ್ಲಿ ತೆರಳುವವರ ಸಂಖ್ಯೆಯೇ ಹೆಚ್ಚಿದ್ದು, ಎಲ್ಲಿ ನೋಡಿದರೂ ಗೂಡ್ಸ್ ವಾಹನಗಳೇ ಕಾಣುತ್ತವೆ.

Comments

Leave a Reply

Your email address will not be published. Required fields are marked *