ನೆಗೆಟಿವ್ ರಿಪೋರ್ಟ್ ಬಂದ್ರೂ ಚಿಕಿತ್ಸೆ ಸಿಕ್ಕಿಲ್ಲ- ಸಹೋದರಿಯ ಮೃತದೇಹದ ಮುಂದೆ ತಮ್ಮನ ಅಳಲು

ಬೆಂಗಳೂರು: ಐದು ದಿನ ಆಸ್ಪತ್ರೆಗೆ ಅಲೆದಾಟ ಮಾಡಿದರೂ ಚಿಕಿತ್ಸೆ ಸಿಗದೇ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇದೀಗ ಸಹೋದರಿಯ ಮೃತದೇಹದ ಎದುರು ಸಹೋದರ ತಮ್ಮ ಅಳಲನ್ನು ತೋಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಐದು ದಿನ ಆಸ್ಪತ್ರೆಗೆ ಅಲೆದಾಟ ಮಾಡಿದರೂ ಚಿಕಿತ್ಸೆ ಸಿಗದೆ ಕಾಮಾಕ್ಷಿಪಾಳ್ಯದ ಮಹಿಳೆ ಮೃತಪಟ್ಟಿದ್ದಾರೆ. ಹೀಗಾಗಿ ಅಕ್ಕನ ಮೃತದೇಹದ ಮುಂದೆ ಸಹೋದರ ತನ್ನ ಅಳಲನ್ನು ಹೇಳಿಕೊಂಡಿದ್ದಾರೆ. ನಾವು ಮೂರು ದಿನ ಕೊರೊನಾ ರಿಪೋರ್ಟಿಗಾಗಿ ಆಸ್ಪತ್ರೆಯಲ್ಲಿ ಅಲೆದಾಡಿದ್ದೇವೆ. ಆಂಟಿಜೆನ್ ಮೂಲಕ ಕೋವಿಡ್ ನೆಗೆಟಿವ್ ರಿಪೋರ್ಟ್ ತೆಗೆದುಕೊಂಡು ಹೋದ್ರೆ, ಆಂಟಿಜೆನ್ ಟೆಸ್ಟಿಂಗ್ ರಿಪೋರ್ಟ್ ನಾವು ನಂಬಲ್ಲ. ಆರ್‌ಟಿಪಿಸಿಆರ್ ಲ್ಯಾಬ್ ರಿಪೋರ್ಟ್ ಬೇಕು ಎಂದು ಹೇಳಿದರು. ಕೊನೆಗೆ ಐದು ದಿನ ಆಸ್ಪತ್ರೆಗೆ ಅಲೆದಾಟ ಮಾಡಿದರೂ ಚಿಕಿತ್ಸೆ ಸಿಗದೆ ನಮ್ಮ ಅಕ್ಕ ಮೃತಪಟ್ಟಿದ್ದಾರೆ ಎಂದು ಅಕ್ಕನ ಸಾವಿನ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಕೊನೆಗೆ ಸಾವನ್ನಪ್ಪಿದ ಮೇಲೆ ಕೊರೊನಾ ಪಾಸಿಟಿವ್ ಅಂತ ಗೊತ್ತಾಗುತ್ತೆ. ಮೃತದೇಹವನ್ನು ಮಣ್ಣು ಮಾಡಲು ಮತ್ತೆ ಈ ವ್ಯವಸ್ಥೆ ಅಲೆದಾಡಿಸಿತು. ಹೀಗಾಗಿ ಸರ್ಕಾರದ ಈ ವ್ಯವಸ್ಥೆಯಿಂದ ಬದುಕಿದ್ದಾಗಲೂ ಕಷ್ಟ, ಮೃತಪಟ್ಟ ಮೇಲೂ ಕಷ್ಟ ಎಂದು ಅಕ್ಕನ ಶವಪೆಟ್ಟಿಗೆ ಮುಂದೆ ತಮ್ಮ ಕಣ್ಣೀರು ಹಾಕಿದ್ದಾರೆ.

ಏನಿದು ಪ್ರಕರಣ?
ಕಾಮಾಕ್ಷಿಪಾಳ್ಯದ ಮಹಿಳೆಗೆ ಉಸಿರಾಟದ ತೊಂದರೆ ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಆಕೆಯನ್ನು ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಕೋವಿಡ್ ರಿಪೋರ್ಟ್ ತೆಗೆದುಕೊಂಡು ಬನ್ನಿ ಅಂತ ಖಾಸಗಿ ಆಸ್ಪತ್ರೆಯವರು ಸರ್ಕಾರಿ ಆಸ್ಪತ್ರೆಗೆ ಕಳುಹಿಸುತ್ತಾರೆ. ಕುಟುಂಬಸ್ಥರು ಮೂರು ದಿನದ ಬಳಿಕ ಹೇಗೋ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಲಿ ವೆಂಟಿಲೇಟರ್ ವ್ಯವಸ್ಥೆ ಇರಲಿಲ್ಲ.

ತದನಂತರ ಆಂಟಿಜೆನ್ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದಿದೆ. ಸರಿ ರಿಪೋರ್ಟ್ ಬಂದಿದೆ ಅಂತ ವೆಂಟಿಲೇಟರ್ ಇರುವ ಖಾಸಗಿ ಆಸ್ಪತ್ರೆಗೆ ಕೆಸಿ ಜನರಲ್‍ನಿಂದ ಕರೆದುಕೊಂಡು ಹೋಗಿದ್ದಾರೆ. ಆಗ ಆಂಟಿಜೆನ್ ಟೆಸ್ಟ್ ನಾವು ನಂಬಲ್ಲ ಲ್ಯಾಬ್ ರಿಪೋರ್ಟ್ ಬೇಕು ಎಂದು ಖಾಸಗಿ ಆಸ್ಪತ್ರೆಯವರು ಹೇಳಿದ್ದಾರೆ. ಕೊನೆಗೆ ಮತ್ತೆ ಟೆಸ್ಟ್ ಮಾಡಿಸಿ ರೋಗಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವೆಂಟಿಲೇಟರ್ ಸಿಗದೆ ಒದ್ದಾಡಿ ಮಹಿಳೆ ಮೃತಪಟ್ಟಿದ್ದಾರೆ.

ಅಷ್ಟರಲ್ಲಿ ಮೃತಪಟ್ಟ ದಿನ ಪಾಸಿಟಿವ್ ಎಂದು ಬಿಬಿಎಂಪಿ ಅಧಿಕಾರಿಗಳು ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಆದರೂ ಮೃತ ದೇಹವನ್ನು ನೀವೆ ಪ್ಯಾಕ್ ಮಾಡಿ ಕೊಡಬೇಕು. ನಾವು ಮುಟ್ಟಲ್ಲ ಎಂದು ಮತ್ತೆ ನಿರ್ಲಕ್ಷ್ಯ ತೋರಿಸಿದ್ದಾರೆ. ಕೊನೆಗೆ ಕುಟುಂಬಸ್ಥರೇ ಮೃತದೇಹವನ್ನು ಪ್ಯಾಕ್ ಮಾಡಿ ಬಿಬಿಎಂಪಿ ಸಿಬ್ಬಂದಿಗೆ ಕೊಟ್ಟಿದ್ದಾರೆ.

Comments

Leave a Reply

Your email address will not be published. Required fields are marked *