ನೀವು ಝೂನಲ್ಲಿ ಇರಲು ಫಿಟ್ ಸಮಾಜದಲ್ಲಿ ಇರಲು ಅನ್‍ಫಿಟ್: ನಳಿನ್ ವ್ಯಂಗ್ಯ

ಹಾಸನ: ಹುಲಿಯಾ ಮತ್ತು ಬಂಡೆ ಝೂನಲ್ಲಿ ಇರಲು ಫಿಟ್ ಸಮಾಜದಲ್ಲಿ ಇರಲು ಅನ್‍ಫಿಟ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ಹಾಸನದ ಚನ್ನರಾಯಪಟ್ಟಣದಲ್ಲಿ ಕಾಂಗ್ರೆಸ್‍ನ ಆರೋಪಕ್ಕೆ ತಿರುಗೇಟು ನೀಡಿದ ಅವರು, ಆಡಳಿತದಲ್ಲಿ ತಪ್ಪಿದ್ರೆ ವಿಧಾನಸೌಧದಲ್ಲಿ ಬಂದು ಗಲಾಟೆ ಮಾಡಿ. ನಿಮಗೆ ಹಕ್ಕಿದೆ. ಬಹಳ ಪುರಾತನ ಇತಿಹಾಸ ಇರುವ ರಾಜಕೀಯ ಪಕ್ಷವಾಗಿ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಜನರಿಗೆ ಭಯ ಮೂಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯ, ರಾಷ್ಟ್ರವನ್ನು ಸುದೀರ್ಘವಾಗಿ ಆಡಳಿತ ಮಾಡಿ ವೆಂಟಿಲೇಟರ್ ಇಲ್ಲ ಸೌಲಭ್ಯ ಇಲ್ಲ ಅಂತಾರೆ. ಇಂದಿನ ಈ ಸ್ಥಿತಿಗೆ ನೀವೆ ಕಾರಣ. ನಿಮ್ಮ ಕಾಲದಲ್ಲಿ ಎಷ್ಟು ವೆಂಟಿಲೇಟರ್ ಬಂದವು ಎಲ್ಲಿ ಹೋದವು. ನಿಮ್ಮ ಆಡಳಿತದ ಕಾಲದಲ್ಲಿ ಡೆಂಗ್ಯೂ, ಹಾವು ಕಡಿತ, ಹುಚ್ಚು ನಾಯಿ ಕಡಿತಕ್ಕೆ ಔಷಧಿಯೇ ಬಂದಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇಂದಿರಾ ಕ್ಯಾಂಟೀನ್‍ನಲ್ಲಿ ಏನೆಲ್ಲಾ ಮೋಸ ಆಗಿದೆ ಲೆಕ್ಕ ಕೊಡಿ. ನಿಮ್ಮ ಕಾಲದಲ್ಲಿ ವಸತಿ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು.

ಪ್ರಜಾಪ್ರಭುತ್ವದ ಕಗ್ಗೊಲೆ ಅಂತೀರಿ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದವರು ಇಂದಿರಾ ಗಾಂಧಿ. ಎಮರ್ಜೆನ್ಸಿ ತಂದವರು, ದೇಶವನ್ನು ಪೂರ್ತಿಯಾಗಿ ಜೈಲಲ್ಲಿ ಇಟ್ಟವರು ನೀವು ತಾನೆ. 20ಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಬಹುಮತ ಪಡೆದ ಪಕ್ಷವನ್ನು ಕಿತ್ತು ಒಗೆದಿದ್ರಿ. ಜನತಾದಳದ ಶಾಸಕರನ್ನು ನೀವೇ ಅಲ್ಲವೆ ತೆಗೆದಿಕೊಂಡಿದ್ದು. ನೀವು ಅಧಿಕಾರ ಹೇಗೆ ಬೇಕಾದರೂ ನಡೆಸಬಹುದು. ನಿಮ್ಮ ಆಡಳಿತ ಸರಿಯಿಲ್ಲ ಎಂದು ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದರೆ ನಮ್ಮ ಆಡಳಿತ ಸರಿಯಿಲ್ಲ ಎನ್ನುತ್ತೀರಾ ಎಂದು ಸಿದ್ದರಾಮಯ್ಯ ಮತ್ತು ಡಿಕೆಶಿ ಆರೋಪಕ್ಕೆ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದರು.

Comments

Leave a Reply

Your email address will not be published. Required fields are marked *