ನೀವಾದ್ರೂ ರೆಮ್‍ಡಿಸಿವರ್ ಇಂಜೆಕ್ಷನ್ ಕೊಡಿಸಿ- ಸಚಿವರ ಮುಂದೆ ರೋಗಿ ಸಂಬಂಧಿಯ ಅಳಲು

– 30 ಸಾವಿರ ಹಣ ಕೊಡ್ತೀನಿ, ಇಂಜೆಕ್ಷನ್ ನೀಡಿ

ಬೀದರ್: ಜಿಲ್ಲೆಯಲ್ಲಿ ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಿದ್ದ ವ್ಯಕ್ತಿಯೊಬ್ಬರಿಗೆ ರೆಮ್‍ಡಿಸಿವರ್ ಇಂಜೆಕ್ಷನ್ ಸಿಗದೆ ಕಷ್ಟಪಡುತ್ತಿರುವುದರ ಕುರಿತು ರೋಗಿಯ ಸಂಬಂಧಿಯೊಬ್ಬರು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಮುಂದೆ ಕೈಮುಗಿದು ಅಳಲು ತೋಡಿಕೊಂಡಿದ್ದಾರೆ.

ತೀವ್ರವಾಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಬೀದರ್ ಜಿಲ್ಲೆಯ ಚಿಟ್ಟಗುಪ್ಪ ತಾಲೂಕಿನ ಕಾರಕಾರಪಳ್ಳಿಯ ಪ್ರದೀಪ್ ಎಂಬ ವ್ಯಕ್ತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರದೀಪ್ ಅವರ ಕೊರೊನಾ ವರದಿ ನೆಗೆಟಿವ್ ಇದ್ದರು ಉಸಿರಾಟದ ಸಮಸ್ಯೆ ದಿನೇ ದಿನೇ ತೀವ್ರವಾಗುತ್ತಿದೆ. ಹೀಗಾಗಿ ಇಂದು ರೆಮ್‍ಡಿಸಿವರ್ ಇಂಜೆಕ್ಷನ್ ಸಿಗುತ್ತಿಲ್ಲಾ. ನಾನು ರೆಮ್‍ಡಿಸಿವರ್ ಇಂಜೆಕ್ಷನ್ ಗಾಗಿ 30 ಸಾವಿರ ಹಣ ಇಟ್ಟುಕೊಂಡು ಓಡಾಡುತ್ತಿದ್ದೇನೆ ಆದರೂ ಸಿಗುತ್ತಿಲ್ಲಾ. ನೀವಾದ್ರೂ ಇಂಜೆಕ್ಷನ್ ಕೊಡಿಸಿ ಎಂದು ಪ್ರಭು ಚವ್ಹಾಣ್ ಗೆ ಕೈಮುಗಿದು 30 ಸಾವಿರ ರೂಪಾಯಿಯ ಹಣದ ಕಂತೆಯನ್ನು ರೋಗಿಯ ಸಂಬಂಧಿ ತೋರಿಸಿದ್ದಾರೆ.

ಕೂಡಲೇ ಪ್ರಭು ಚವ್ಹಾಣ್ ಅವರು ಜಿಲ್ಲಾಡಳಿತಕ್ಕೆ ತಿಳಿಸಿ ಇಂಜೆಕ್ಷನ್ ಕೊಡಿಸುತ್ತೇನೆ ಎಂದು ಸಮಾಧಾನ ಪಡಿಸಿದರು. ಎಲ್ಲರೂ ಕೂಡ ಹೀಗೆ ಹೇಳುತ್ತಿದ್ದಾರೆ. ನೀವಾದರೂ ಸಮಸ್ಯೆ ಬಗೆಹರಿಸಿ ಎಂದು ಸಚಿವರೊಂದಿಗೆ ರೋಗಿಯ ಸಂಬಂಧಿ ಮನವಿ ಮಾಡಿಕೊಂಡಿದ್ದಾರೆ.

ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರತೀಶ್ ಕುಮಾರ್, ಇದನ್ನೆಲ್ಲಾ ಗಮನಿಸುತ್ತಿದ್ದಂತೆ ಗಡಿ ಜಿಲ್ಲೆ ಬೀದರ್ ನಲ್ಲಿ ರೆಮಿಡಿಸಿವರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆಯಾ? ಎಂಬ ಅನುಮಾನ ಕೂಡ ಕಾಡತೊಡಗುತ್ತಿದೆ. 25 ರಿಂದ 30 ಸಾವಿರಕ್ಕೆ ರೆಮಿಡಿಸಿವರ್ ಇಂಜೆಕ್ಷನ್ ಮಾರಾಟವಾಗುತ್ತಿದ್ದು, ಇದೊಂದು ದೊಡ್ಡ ಮೆಡಿಕಲ್ ಮಾಫಿಯಾ ಆಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಪ್ರತಿಯೊಂದು ರೋಗಿಗಳು ಹಣ ಹಿಡಿದು ಕೊಂಡು ಇಂಜೆಕ್ಷನ್ ಗಾಗಿ ಓಡಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *