ನಿವೃತ್ತಿಗೆ ಎರಡು ತಿಂಗಳು ಇರುವಾಗಲೇ ಪಿಎಸ್‍ಐ ಕೊರೊನಾಗೆ ಬಲಿ

ಶಿವಮೊಗ್ಗ: ನಿವೃತ್ತಿಗೆ ಕೇವಲ ಎರಡು ತಿಂಗಳು ಇರುವಾಗ ಕೊರೊನಾ ಸೋಂಕು ತಗುಲಿ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.

ಮೃತಪಟ್ಟವರನ್ನು ಜಿಲ್ಲೆಯ ಭದ್ರಾವತಿಯ ಸಂಚಾರಿ ಠಾಣೆ ಪಿಎಸ್‍ಐ ರಮೇಶ್ ಕೆ.ಬಿ.(60) ಎಂದು ಗುರುತಿಸಲಾಗಿದೆ. ಮೃತ ಪಿಎಸ್ ಐ ರಮೇಶ್ ಮೂಲತಃ ಸಾಗರ ತಾಲೂಕಿನ ಬಾಳೆಗುಂಡಿ ಗ್ರಾಮದವರಾಗಿದ್ದು, ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ರಮೇಶ್ ಅವರಿಗೆ ಮೇ.14 ರಂದು ಕೊರೊನಾ ಸೋಂಕು ದೃಢವಾಗಿತ್ತು. ಸೋಂಕು ಕಾಣಿಸಿಕೊಂಡ ಬಳಿಕ ಒಂದು ವಾರಗಳ ಕಾಲ ಹೋಮ್ ಐಸಲೋಷನ್ ಗೆ ಒಳಗಾಗಿದ್ದರು.

ಹೋಮ್ ಐಸಲೋಷನ್ ನಲ್ಲಿರುವಾಗ ಉಸಿರಾಟದ ಸಮಸ್ಯೆ ತೀವ್ರವಾಗಿ ಉಲ್ಬಣಿಸಿದೆ. ಹೀಗಾಗಿ ರಮೇಶ್ ಕುಟುಂಬಸ್ಥರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಮೃತ ರಮೇಶ್ ಅವರಿಗೆ ಕೋವಿಡ್ ಸೋಂಕಿನ ಜೊತೆಗೆ ಹೃದಯ ಸಂಬಂಧಿ ಕಾಯಿಲೆ ಸಹ ಇದ್ದಿದ್ದರಿಂದ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಪಾಸಿಟಿವಿಟಿ ರೇಟ್ ಶೇ.10.66ಕ್ಕೆ ಇಳಿಕೆ- ಇಂದು 16,068 ಹೊಸ ಪ್ರಕರಣ, 364 ಸಾವು

ಶುಕ್ರವಾರ ಮಧ್ಯಾಹ್ನ ಆರೋಗ್ಯದಲ್ಲಿ ಏರುಪೇರು ಆಗಿದ್ದು, ತೀವ್ರ ಅಸ್ವಸ್ಥಗೊಂಡಿದ್ದರು. ವೈದ್ಯರು ಪರೀಕ್ಷೆ ನಡೆಸಿದ ಬಳಿಕ ಬದುಕುವುದು ಕಷ್ಟವಿದೆ ಮನೆಗೆ ಕರೆದುಕೊಂಡು ಹೋಗಿ ಎಂದು ಮೃತ ರಮೇಶ್ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸ್ವಗ್ರಾಮ ಸಾಗರ ತಾಲೂಕಿನ ಬಾಳೆಗುಂಡಿಗೆ ಕರೆದುಕೊಂಡು ಹೋಗುತ್ತಿರುವಾಗಲೇ ಮಾರ್ಗ ಮಧ್ಯೆ ಪಿಎಸ್ ಐ ರಮೇಶ್ ಮೃತಪಟ್ಟಿದ್ದಾರೆ.

ಮೃತ ಪಿಎಸ್ ಐ ರಮೇಶ್ ಜುಲೈ 31ಕ್ಕೆ ನಿವೃತ್ತಿ ಹೊಂದುತ್ತಿದ್ದರು. ನಿವೃತ್ತಿ ನಂತರ ಕುಟುಂಬ ಸದಸ್ಯರೊಂದಿಗೆ ಆನಂದದ ಜೀವನ ಕಳೆಯುವ ಜೊತೆಗೆ, ವಿಶ್ರಾಂತಿ ಪಡೆಯಬೇಕು ಎಂಬ ಕನಸು ಹೊಂದಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ನಿವೃತ್ತಿಗೆ ಕೇವಲ ಎರಡು ತಿಂಗಳು ಇರುವಾಗಲೇ ಕೊರೊನಾ ಮಹಾಮಾರಿ ಬಲಿ ತೆಗೆದುಕೊಂಡಿದೆ. ಮೃತ ರಮೇಶ್ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ. ಜಿಲ್ಲಾ ಪೊಲೀಸ್ ಇಲಾಖೆ ಸಂತಾಪ ಸೂಚಿಸಿದೆ.

Comments

Leave a Reply

Your email address will not be published. Required fields are marked *