ನಿರ್ಲಕ್ಷ್ಯ ಮಾಡಿದ್ರಿಂದ ಕುಟುಂಬದ 18 ಜನರಿಗೆ ಸೋಂಕು ತಗುಲಿತ್ತು, ಇಂಥ ರೋಗ ವೈರಿಗಳಿಗೂ ಬರಬಾರದು: ಹೆಬ್ಬಾಳ್ಕರ್

ಬೆಳಗಾವಿ: ನಿರ್ಲಕ್ಷ್ಯ ಮಾಡಿದ್ದರಿಂದ ನಮ್ಮ ಮನೆಯಲ್ಲಿ ಹದಿನೆಂಟು ಜನ ಕುಟುಂಬಸ್ಥರಿಗೆ ಕೊರೊನಾ ಸೋಂಕು ದೃಢವಾಗಿತ್ತು. ದೇವರ ದಯೆಯಿಂದ ಎಲ್ಲರೂ ಗುಣಮುಖರಾಗಿದ್ದೇವೆ. ಕೊರೊನಾ ಬಗ್ಗೆ ನಾವೂ ನಿರ್ಲಕ್ಷ್ಯ ಮಾಡಿದ್ದೆವು. ಇಂತಹ ರೋಗ ನಮ್ಮ ವೈರಿಗಳಿಗೂ ಬರಬಾರದು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಕೊರೊನಾ ಸೂೀಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ರೋಗ ನಮ್ಮ ವೈರಿಗಳಿಗೂ ಬರಬಾರದು. ಕೋವಿಡ್ ವಾರಿಯರ್ಸ್ ದೇವರಾಗಿ ನಮ್ಮ ಕಣ್ಣಿಗೆ ಕಾಣಿಸುತ್ತಿದ್ದಾರೆ. ಎರಡನೇ ಅಲೆ ಬೇಗ ಸ್ಪ್ರೇಡ್ ಆಗುತ್ತಿರುವ ಕಾರಣಕ್ಕೆ ನಮ್ಮ ಕಂಟ್ರೋಲ್ ಗೆ ಸಿಗುತ್ತಿಲ್ಲ. ನಾವೆಲ್ಲರೂ ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ. ನಮ್ಮ ಜಿಲ್ಲೆ, ರಾಜ್ಯ, ದೇಶವನ್ನು ಕೊರೊನಾದಿಂದ ಕಾಪಾಡಬೇಕಿದೆ ಎಂದರು.

ಈಗ ಅನಿವಾರ್ಯ ಪರಿಸ್ಥಿತಿ ಇದೆ ಕರ್ಫ್ಯೂ ಜಾರಿ ಮಾಡದಿದರೆ ಕಷ್ಟ ಆಗುತ್ತೆ. ಜನತಾ ಕರ್ಫ್ಯೂ ಮಾದರಿಯಲ್ಲಿ ಮಾಡಿದರೆ ನಮ್ಮ ಜನರಿಗೆ ತಿಳುವಳಿಕೆ ಬರುತ್ತಿಲ್ಲ. ಒಂದು ವಾರ ಅಥವಾ ಹತ್ತು ದಿನ ಲಾಕ್‍ಡೌನ್ ಮಾಡಿದರೆ ಒಳ್ಳೆಯದು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ನಾನು ನಿರ್ಲಕ್ಷ್ಯ ಮಾಡಿದಾಗ ಕೋವಿಡ್ ಬಗ್ಗೆ ಇಷ್ಟೊಂದು ತೀವ್ರತೆ ಇದೆ ಎಂದು ಗೊತ್ತಿರಲಿಲ್ಲ. ಖಂಡಿತವಾಗಿಯೂ ಇದು ಬಹಳ ಕೆಟ್ಟ ರೋಗ, ಅನುಭವಿಸಿದವರಿಗೇ ಗೊತ್ತು. ನನ್ನ ವೈರಿಗಳಿಗೂ ಈ ರೋಗ ಕೊಡಬೇಡ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ ಎಂದರು.

Comments

Leave a Reply

Your email address will not be published. Required fields are marked *