ನಿಮ್ಮ ಕೈಯಲ್ಲಿ ಆಗಲ್ಲ ಅಂದ್ರೆ ನಾನೇ ಚೆಕ್ ಕೊಡ್ತೀನಿ, ಅವ್ರನ್ನ ಕಳಿಸಿಬಿಡಿ: ಡಿಕೆಶಿ

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಊರಿಗೆ ತೆರಳಲು ವಲಸೆ ಕಾರ್ಮಿಕರು ಸಾಲುಗಟ್ಟಿ ನಿಂತಿದ್ದನ್ನು ನೋಡಿದರೆ ಅಯ್ಯೋ ಅನಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇ ಚೆಕ್ ಕೊಡ್ತೀನಿ ಅವರನ್ನ ಬಿಟ್ಟು ಬನ್ನಿ. ಸರ್ಕಾರದ ಕೈಯಲ್ಲಿ ಆಗಲ್ಲ ಅಂದ್ರೆ ನಾನೇ ಕಳಿಸಿಕೊಡ್ತೀನಿ. ಅವರಿಗೆ ಅಹಾರದ ಪೊಟ್ಟಣ ಕೊಟ್ಟಿಲ್ಲ. ಸರ್ಕಾರದ ಕೈಯಲ್ಲಿ ಆಗಲ್ಲ ಅಂದ್ರೆ ನಾನು ಮಾಡ್ತೀನಿ ಎಂದು ಸವಾಲೆಸೆದರು.

ಯಡಿಯೂರಪ್ಪ ಅವರೇ ನೀವೇ ಕಣ್ಣು ತೆರೆದು ನೋಡಿ. ನಾನು ಏನಾದರೂ ಮಾತನಾಡಿದ್ರೆ ನಿಮ್ಮ ಸಚಿವರು ನನ್ನ ವಿರುದ್ಧ ಮಾತನಾಡ್ತಾರೆ. ನೀಮ್ಮ ಕೈಯಲ್ಲಿ ಆಗುತ್ತಾ ಇಲ್ವಾ ಹೇಳಿ. ನಿಮ್ಮ ಕೈಯಲ್ಲಿ ಆಗಲ್ಲ ಅಂದ್ರೆ ಸರ್ಕಾರಕ್ಕೆ ನಾನು ಚೆಕ್ ಕೊಡಲು ಸಿದ್ಧನಿದ್ದೇನೆ. ಅವರವರ ಊರುಗಳಿಗೆ ಕಳುಹಿಸಿ ಕೊಡುವ ಕೆಲಸ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸೇವಾಸಿಂಧುನಲ್ಲಿ ತವರು ರಾಜ್ಯಗಳಿಗೆ ಹೋಗಲು ಅರ್ಜಿ ಸಲ್ಲಿಸಿದವರಿಗೆ ಸರ್ಕಾರದಿಂದ ಅನುಮತಿ ನೀಡಲಾಗಿದೆ. ಹೀಗಾಗಿ ಒಂದೇ ದಿನ 6 ಸಾವಿರ ಮಂದಿಗೆ ಸಮ್ಮತಿಸಲಾಗಿದೆ. ಅರಮನೆ ಮೈದಾನದ ಬಳಿ ಸುಮಾರು 6 ಸಾವಿರ ಮಂದಿ ಜಮಾಯಿಸಿದ್ದಾರೆ. ಯಾವುದೇ ಸೋಷಿಯಲ್ ಡಿಸ್ಟೆನ್ಸ್ ಇಲ್ಲ, ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕಾರ್ಮಿಕರು ಜಮಾವಣೆಗೊಂಡಿದ್ದಾರೆ. ಇಂದು ಎರಡು ರೈಲುಗಳು ಒರಿಸ್ಸಾ ಮತ್ತು ಮಣಿಪುರಕ್ಕೆ ಹೊರಡಲಿವೆ.

ಚಿಕ್ಕಬಾಣವಾರದಿಂದ ಮಧ್ಯಾಹ್ನದ ನಂತರ ಹೊರಡಲಿವೆ. 2,800 ಜನಕ್ಕಷ್ಟೇ ,ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ಆದರೆ ಮೇಖ್ರಿ ಸರ್ಕಲ್ ನಿಂದ ಕಾವೇರಿ ಥಿಯೇಟರ್ ವರೆಗೂ ಜನಸಾಗರವೇ ನೆರೆದಿದ್ದು, ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪ್ಯಾಲೇಸ್ ಗ್ರೌಂಡ್ ಬಳಿ ಹೊರ ರಾಜ್ಯದ ನಿವಾಸಿಗಳ ದಂಡು ನೆರೆದಿದ್ದು, ಸುಮಾರು ಮೂರು ಕಿಲೋಮೀಟರ್ ನಷ್ಟು ಜನ ಕ್ಯೂ ನಿಂತಿದ್ದಾರೆ.

Comments

Leave a Reply

Your email address will not be published. Required fields are marked *