ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ, ಮಾರ್ಗಸೂಚಿ ಪಾಲಿಸಿ: ಶ್ರೀರಾಮುಲು

– ಭಯ ಬೇಡ, ಮೆಟ್ರೋದಲ್ಲಿ ಸಂಚರಿಸಿ

ಬೆಂಗಳೂರು: ಇಂದಿನಿಂದ ಮೆಟ್ರೋ ಸಂಚಾರ ಆರಂಭ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಇಂದು ಮೆಟ್ರೋದಲ್ಲಿ ಪರಿಶೀಲನೆ ನಡೆಸಿದರು. ವಿಧಾನಸೌಧದ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ್ದ ಅವರು ಖುದ್ದು ಮೆಟ್ರೋದಲ್ಲಿ ಪ್ರಯಾಣಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, 5 ತಿಂಗಳ ನಂತರ ಮೆಟ್ರೋ ಸಂಚಾರ ಪ್ರಾರಂಭವಾಗಿದೆ. ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಪರಿಶೀಲನೆ ನಡೆಸಲು ನಾನೇ ಖುದ್ದು ಸಂಚಾರ ಮಾಡಿ ತಿಳಿದುಕೊಳ್ಳುತ್ತಿದ್ದೇನೆ. ಪ್ರಯಾಣಿಕರು ಯಾರು ಆತಂಕಗೊಳ್ಳುವ ಅಗತ್ಯವಿಲ್ಲ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಇದೆ. ಆರೋಗ್ಯ ಇಲಾಖೆ, ಮೆಟ್ರೋ ನೀಡಿರುವ ಮಾರ್ಗಸೂಚಿ ಫಾಲೋ ಮಾಡಿ ಎಂದು ಸಲಹೆ ನೀಡಿದರು.

ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ಸ್ಯಾನಿಟೈಸ್ ಹಾಕಿಕೊಳ್ಳಬೇಕು. ಸಾಮಾಜಿಕ ಅಂತರದಲ್ಲಿ ಪ್ರಯಾಣ ಮಾಡಬೇಕು. ಸುರಕ್ಷಿತವಾಗಿ ಸಂಚಾರ ಮಾಡಿ. ಆರೋಗ್ಯ ಇಲಾಖೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. 6 ಬೋಗಿಗಳಿಂದ ಸುಮಾರು 400 ಕ್ಕೂ ಹೆಚ್ಚು ಪ್ರಯಾಣಿಸುತ್ತಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ, ನನಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು. ಡ್ರಗ್ಸ್ ಮಾಫಿಯಾ ವಿಚಾರ ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ತರುತ್ತಿದೆ. ನಮ್ಮ ಸರ್ಕಾರ ಈ ಬಗ್ಗೆ ತನಿಖೆ ಮಾಡುತ್ತಿದೆ. ಮಾಫಿಯಾವನ್ನು ಬುಡ ಸಮೇತ ನಮ್ಮ ಸರ್ಕಾರ ಕಿತ್ತು ಹಾಕುತ್ತೆ. ರಾಜಕೀಯ ರಂಗ, ರಾಜಕಾರಣಿಗಳ ಮಕ್ಕಳು, ಚಿತ್ರನಟರು ಯಾರೇ ಡ್ರಗ್ಸ್ ಮಾಫಿಯಾದಲ್ಲಿದ್ದರು ಅವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂದು ಸ್ಪಷ್ಟಪಡಿಸಿದರು.

Comments

Leave a Reply

Your email address will not be published. Required fields are marked *