ನಾವು ನಾಯಿ ಜಾತಿಯವರು, ಮನೆಯ ಊಟ ತಿಂದ್ಮೇಲೆ ನಿಯತ್ತಿಂದ ಇರ್ತೇವೆ: ಯತ್ನಾಳ್

ಬಳ್ಳಾರಿ: ಹೋರಾಟ ಮಾಡಿದರೆ ಏನೂ ಸಿಗುವುದಿಲ್ಲ ಎಂದಿದ್ದ ಹಾಲುಮತದ ಒಬ್ಬ ಸಚಿವ ಇಂದು ಹೋರಾಟಕ್ಕೆ ಇಳಿದಿದ್ದಾರೆ ಎಂದು ಹೇಳುವ ಮೂಲಕ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ನಡೆಯುತ್ತಿರುವ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಅವರು, ಹೋರಾಟ ಮಾಡಿದರೆ ಏನೂ ಸಿಗುವುದಿಲ್ಲ ಎಂದಿದ್ದ ಹಾಲುಮತದ ಒಬ್ಬ ಸಚಿವರೊಬ್ಬರು ಈಗ್ಯಾಕೆ ಹೋರಾಟಕ್ಕೆ ಬಂದರು. ಮೀಸಲಾತಿ ಕೊಡಿ ಎಂದು ಯಾಕೆ ಹೋರಾಟ ಮಾಡುತ್ತಿದ್ದಾರೆ. ಹೋರಾಟದಿಂದಲೇ ಇಂದು ಏನೆಲ್ಲಾ ಪಡೆಯೋಕೆ ಸಾಧ್ಯವಾಗಿದೆ. ಹೋರಾಟ ಮಾಡಿದ ಕಾರಣಕ್ಕೆ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಒಂದೇ ಮಾತು ಇರಬೇಕು, ಆಗೋಂದು, ಈಗೊಂದು ಇರಬಾರದು ಎಂದು ಹೆಸರು ಹೇಳದೇ ಈಶ್ವರಪ್ಪ ವಿರುದ್ಧ ಕಿಡಿಕಾರಿದ್ದಾರೆ.

ನಾವು ನಾಯಿ ಜಾತಿಯವರು, ಮನೆಯ ಊಟ ತಿಂದ ಮೇಲೆ ನಾಯಿ ಹೇಗೆ ನಿಯತ್ತಿನಿಂದ ಇರುತ್ತೋ ಹಾಗೆ ನಾವೂ ಸಮಾಜಕ್ಕೆ ಒಳಿತಾಗಲಿ ಎಂದು ಹೋರಾಟ ಮಾಡುತ್ತಿದ್ದೇವೆ. ಇಂದು ಪಂಚಮಸಾಲಿ, ಹಾಲುಮತ, ವಾಲ್ಮೀಕಿ ಸಮಾಜಗಳು ತಮ್ಮ ನ್ಯಾಯಯುತ ಬೇಡಿಕೆಗಳಿಗೆ ಹೋರಾಟ ಮಾಡುತ್ತಿವೆ. ಇದಕ್ಕೆ ಮಾಧ್ಯಮಗಳು ಸ್ಪಂದಿಸುವುದಿಲ್ಲ. ತುಪ್ಪದ ಬೆಡಗಿ, ಯುವರಾಜನ ಹಿಂದೆ ಓಡುತ್ತಿವೆ ಎಂದು ಪರೋಕ್ಷವಾಗಿ ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ಯಾರಾದರೂ ಮಂತ್ರಿಯಾಗ್ತಾರೆ, ಮತ್ತೊಬ್ಬರು ಸಿಎಂ(ವಿಜಯೇಂದ್ರ) ಆಗ್ತಾರೆ ಎಂದು ಅರ್ಧ ಗಂಟೆ ಪ್ರೋಗ್ರಾಂ ಮಾಡ್ತಾರೆ. ಅದನ್ನು ಮಾಣಿಕ್ಯ ಮಾಡಿಸಿದ ಅಂತ ಮಾಧ್ಯಮಗಳು ಹೇಳಿ, ಹೊಗಳುತ್ತವೆ. ಇಂತಹ ಪ್ರೋಗ್ರಾಂಗಳಿಗೆ ಎಷ್ಟು ಹಣ ಅಂತ ನನಗೆ ಗೊತ್ತಿದೆ. ಕೆಲವೊಮ್ಮೆ ನಾಟಕ ಕಂಪನಿಗಳು ಯಾವ್ಯಾವ ರೀತಿಯಲ್ಲಿ ಕೆಲಸ ಮಾಡುತ್ತವೆ ಎಂದೂ ಗೊತ್ತಿದೆ. ಕೇವಲ ಸಮಾಜದ ಹೆಸರು ಹೇಳಿ ಮಂತ್ರಿಗಳಾಗಿದ್ದಾರೆ, ಅವರು ಸಮಾಜಕ್ಕೆ ಬದ್ಧರಾಗಿರಬೇಕು ಎಂದು ನೂತನ ಸಚಿವರ ಕಾಲೆಳೆದರು.

Comments

Leave a Reply

Your email address will not be published. Required fields are marked *