ನಾವು ಇನ್ನೂ ಮಂತ್ರಿ ಆಗಿಲ್ಲ, ಅದೇ ನಮ್ ಕಷ್ಟ: ಎಂಟಿಬಿ

– ನಮ್ಮ ಹಣೆಬರಹ ಕೆಟ್ಟಿದೆ

ಬೆಂಗಳೂರು: ಎಂಎಲ್‍ಸಿ ಆಗಿ ಐದು ತಿಂಗಳಾಗಿದೆ. ನಾವು ಇನ್ನೂ ಮಂತ್ರಿ ಆಗಿಲ್ಲ. ನಮ್ಮ ಹಣೆಬರಹ ಕೆಟ್ಟಿರಬೇಕು. ಅದಕ್ಕೆ ಇನ್ನೂ ನಾವು ಮಂತ್ರಿ ಆಗಿಲ್ಲ. ಸದ್ಯ ಮಂತ್ರಿ ಆಗದೇ ಇರುವುದೇ ನಮ್ ಕಷ್ಟ ಎಂದು ಎಂಎಲ್‍ಸಿ, ಸಚಿವ ಸ್ಥಾನದ ಆಕಾಂಕ್ಷಿ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ದೆಹಲಿಯಿಂದ ವಾಪಸ್ಸಾಗಿರುವ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಇಂದು ಸದಾಶಿವ ನಗರದ ನಿವಾಸದಲ್ಲಿ ಎಂಟಿಬಿ ಭೇಟಿ ಮಾಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಭೇಟಿಯಲ್ಲಿ ವಿಶೇಷ ಏನಿಲ್ಲ. ಅವರ ಮೇಲೆ ಮೇಲೆ ನಮಗೆ ಅಸಮಧಾನ ಏನೂ ಇಲ್ಲ. ನಿನ್ನೆ ಖಾಸಗಿ ಹೊಟೇಲಿನಲ್ಲಿ ಎಲ್ಲರೂ ಕಷ್ಟ-ಸುಖ ಹಂಚ್ಕೊಳ್ಳೋಕೆ ಸೇರಿದ್ವಿ. ಮುಂಬೈ ಬಳಿಕ ನಾವು ಒಟ್ಟಿಗೆ ಸೇರಿರಲಿಲ್ಲ. ಕಷ್ಟ ಅಂದ್ರೆ, ನಾವು ಇನ್ನೂ ಮಂತ್ರಿ ಆಗಿಲ್ಲ ಅದೇ ನಮ್ ಕಷ್ಟ ಎಂದರು.

ಸಚಿವ ಸ್ಥಾನ ಕೊಡುತ್ತೇನೆ, ಸಚಿವರನ್ನಾಗಿ ಮಾಡುತ್ತೇನೆ ಎಂದು ಸಿಎಂ ಹೇಳುತ್ತಲೇ ಇದ್ದಾರೆ. ಆದರೆ ಈವರೆಗೂ ಮಂತ್ರಿ ಮಾಡಿಲ್ಲ. ಮಂತ್ರಿ ಆಗುವವರೆಗೂ ಕಾಯಲೇಬೇಕು. ನಾನು ವಿಧಾನಪರಿಷತ್ ಸದಸ್ಯನಾಗಿ 5 ತಿಂಗಳಾಗಿದೆ. ಮಂತ್ರಿ ಯಾವಾಗ ಎಂದು ನೀವೇ ಕೇಳಬೇಕು. ನಾವು 17 ಮಂದಿ ಒಟ್ಟಾಗಿ ಇದ್ದೇವೆ ಎಂದು ಎಂಟಿಬಿ ತಿಳಿಸಿದರು.

ಇದೇ ವೇಳೆ ಮಂತ್ರಿಯಾದವರ ಹಣೆಬರಹ ಚೆನ್ನಾಗಿತ್ತು. ನಮ್ಮ ಹಣೆಬರಹ ಕೆಟ್ಟಿದೆ ಎಂದು ಅಸಮಧಾನ ವ್ಯಕ್ತಪಡಿಸಿದ ಎಂಟಿಬಿ, ನಮ್ಮ ಪರವೂ ರಮೇಶ್ ಜಾರಕಿಹೊಳಿ ಹೈಕಮಾಂಡ್ ಬಳಿ ಮಂತ್ರಿ ಸ್ಥಾನ ಕೇಳಿದ್ದಾರೆ ಎಂದರು.

ನಿನ್ನೆ ತಾನೇ ಖಾಸಗಿ ಹೊಟೇಲಿನಲ್ಲಿ ಮಿತ್ರಮಂಡಳಿ ಸದಸ್ಯರು ಸಭೆ ನಡೆಸಿದ್ದರು. ಇದೀಗ ಸಚಿವ ರಮೇಶ್ ಜಾರಕಿಹೊಳಿ ನಿವಾಸ ಮತ್ತೆ ರಾಜಕೀಯ ಬೆಳವಣಿಗೆಗಳ ಕೇಂದ್ರವಾಗಿದೆ. ದೆಹಲಿಯಿಂದ ವಾಪಸ್ಸಾದ ಬೆನ್ನಲ್ಲೇ ಜಾರಕಿಹೊಳಿ ನಿವಾಸಕ್ಕೆ ಬಿಜೆಪಿ ಶಾಸಕ ರಾಜುಗೌಡ ಭೇಟಿ ನೀಡಿ ಮಾತುಕತೆ ನಡೆಸಿದ್ದು, ಕುತೂಹಲ ಹುಟ್ಟಿಸಿದೆ.

Comments

Leave a Reply

Your email address will not be published. Required fields are marked *