ನಾಳೆಯಿಂದ 5 ದಿನ ಚಾಮುಂಡಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ

ಮೈಸೂರು: ಕೊರೊನಾ ವೈರಸ್ ಭೀತಿ ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣ ನಾಳೆಯಿಂದ ಐದು ದಿನ ಮೈಸೂರು ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ನಾಳೆ ಮೂರನೇ ಆಷಾಢ ಶುಕ್ರವಾರ ಹಾಗೂ ವಾರಾಂತ್ಯ ಶನಿವಾರ, ಭಾನುವಾರದಂದು ಚಾಮುಂಡಿ ಬೆಟ್ಟಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧವಿದೆ. ಇದರ ಜೊತೆಗೆ ಸೋಮವಾರ ಚಾಮುಂಡೇಶ್ವರಿ ದೇವಿಯ ಜನ್ಮೋತ್ಸವವಿರುವ ಕಾರಣ ಹಾಗೂ ಆಷಾಢ ಮಾಸದ ಕಡೆಯ ಮಂಗಳವಾರ ಸೇರಿ ಸತತ ಐದು ದಿನಗಳ ಕಾಲ ಚಾಮುಂಡಿಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಮಾಡಲಾಗಿದೆ.

ಜುಲೈ 17ರಂದು ಕಡೆಯ ಆಷಾಢ ಶುಕ್ರವಾರ ಇರುವ ಕಾರಣ ಅಂದು ಕೂಡ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಉತ್ತನಹಳ್ಳಿ ದೇವಾಲಯಕ್ಕೂ ನಾಳೆಯಿಂದ ಸತತ ಐದು ದಿನಗಳ ಕಾಲ ಹಾಗೂ ಕೊನೆಯ ಆಷಾಢ ಶುಕ್ರವಾರ ಜುಲೈ 17ರಂದು ಭಕ್ತರ ಪ್ರವೇಶಕ್ಕೆ ನಿರ್ಬಂಧವಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಆದೇಶ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *