ನಾಳೆಯಿಂದ ಕೋಟೆನಾಡಿಗೆ ಸಂಪೂರ್ಣ ಬೀಗ – ದಿನ ಬಿಟ್ಟು ದಿನ ಟಫ್ ಲಾಕ್‍ಡೌನ್ ಜಾರಿ

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಮಹಾಮಾರಿಯ ರೌದ್ರಾವತಾರಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮೇ 26 ರಿಂದ ಜೂನ್ 7 ರವರೆಗೆ ಒಂದು ದಿನ ಬಿಟ್ಟು ಒಂದು ದಿನ ಸಂಪೂರ್ಣ ಲಾಕ್‍ಡೌನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೋವಿಡ್-19ಗೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇ 26 ರಿಂದ ಜೂನ್ 7 ರಂದು ಬೆಳಗ್ಗೆ 6 ಗಂಟೆಯವರೆಗೆ ದಿನ ಬಿಟ್ಟು ಒಂದು ದಿನ ಸಂಪೂರ್ಣ ಲಾಕ್‍ಡೌನ್ ವಿಧಿಸಲಾಗಿದೆ. ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರಗಳಂದು ಸಂಪೂರ್ಣ ಲಾಕ್‍ಡೌನ್ ಇರುತ್ತದೆ ಎಂದು ಹೇಳಿದರು.

ಇನ್ನೂ ಮೇ 27, 29, 30 ಹಾಗೂ ಜೂನ್ 01, 03, 05 ಹಾಗೂ 06 ರಂದು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ವಿಧಿಸಲಾಗಿದೆ. ಈ ದಿನಗಳಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಸೇವೆಗಳಿರುವುದಿಲ್ಲ. ತರಕಾರಿ, ಹಣ್ಣು, ದಿನಸಿ ಅಂಗಡಿಗಳು ಸಹ ಇರುವುದಿಲ್ಲ. ಆದ್ರೆ ಹಾಲಿನ ಉತ್ಪನ್ನಗಳು ಮಾತ್ರ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಇರುತ್ತದೆ.

ಜೊತೆಗೆ ಮೇ 26, 28, 31 ಹಾಗೂ ಜೂನ್ 02 ಹಾಗೂ 04 ರಂದು ಬೆಳಗ್ಗೆ 6 ರಿಂದ 10 ರವೆರೆಗೆ ಸಂಪೂರ್ಣ ಲಾಕ್‍ಡೌನ್‍ನಿಂದ ವಿನಾಯಿತಿ ನೀಡಲಾಗಿದೆ. ಲಾಕ್‍ಡೌನ್ ವಿನಾಯಿತಿ ದಿನಗಳಂದು ಬೆಳಗ್ಗೆ 06 ರಿಂದ 10 ರವರೆಗೆ ಮಾತ್ರ ಅಗತ್ಯ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *