ನಾಲ್ಕು ವರ್ಷ ಜೈಲು ಶಿಕ್ಷೆ ಪೂರ್ಣ – ಜೈಲಿನಿಂದ ಶಶಿಕಲಾ ಬಿಡುಗಡೆ

– ಜೈಲಿನಿಂದ ಬಿಡುಗಡೆಯಾದರೂ ಸದ್ಯಕ್ಕಿಲ್ಲ ತವರಿಗೆ ಪ್ರಯಾಣ

ಬೆಂಗಳೂರು: 4 ವರ್ಷಗಳ ಕಾಲ ಸುದೀರ್ಘ ಜೈಲುವಾಸದ ಅಂತ್ಯದ ನಂತರ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆಪ್ತೆ ವಿ.ಕೆ ಶಶಿಕಲಾ ನಟರಾಜನ್ ಇಂದು ಬಿಡುಗಡೆಯಾಗಿದ್ದಾರೆ.

ಅಕ್ರಮ ಆಸ್ತಿಗಳಿಕೆ ಸಂಬಂಧ ಶಶಿಕಲಾ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಪರಪ್ಪನಗ್ರಹಾರದಲ್ಲಿ ಸೆರೆ ವಾಸದಲ್ಲಿ ನಾಲ್ಕು ವರ್ಷಗಳ ಕಾಲ ಇದ್ದ ಶಶಿಕಲಾ ಇಂದು ಬಿಡುಗಡೆಯಾಗಿದ್ದಾರೆ.

ಜೈಲು ಶಿಕ್ಷೆಯ ಅವಧಿ ಅಂತ್ಯಗೊಂಡಿದ್ದರೂ ಇಂದೇ ಶಶಿಕಲಾ ತಮಿಳುನಾಡಿಗೆ ತೆರಳುವಂತಿಲ್ಲ. ಶಶಿಕಲಾಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿನಿಂದ ಗುಣಮುಖವಾಗಿದ್ದರೂ ಕೆಲದಿನಗಳ ಕಾಲ ಹೋಮ್‍ಕ್ವಾರಂಟೈನ್‍ನಲ್ಲಿ ಇರುವಂತೆ ಸೂಚನೆ ನೀಡಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ವಿಕ್ಟೋರಿಯಾ ಆಸ್ಪತ್ರೆಗೆ ಜೈಲಾಧಿಕಾರಿಗಳು ಭೇಟಿ ನೀಡಿ ಜೈಲಿನ ನಿಯಾಮವಾಳಿ ಪ್ರಕಾರ ಬಿಡುಗಡೆ ಮಾಡಿದ್ದಾರೆ. ಎರಡ್ಮೂರು ದಿನದಲ್ಲಿ ಆಸ್ಪತ್ರೆಯಿಂದ ಚಿನ್ನಮ್ಮ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದ್ದು ನಂತರ ಅಂಬುಲೆನ್ಸ್ ಮೂಲಕ ಚೆನೈಗೆ ತೆರಳಿ ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕಾಗುತ್ತದೆ.

ಜಯಲಲಿತಾ, ಶಶಿಕಲಾ ಮತ್ತು ಅವರ ಆಪ್ತರ ಮೇಲಿದ್ದ ಅಪಾರ ಸಂಪತ್ತು, ಅಕ್ರಮ ಆಸ್ತಿ ಹೊಂದಿದ್ದ ಆರೋಪ ಸುಪ್ರೀಂಕೋರ್ಟ್‍ನಲ್ಲಿ ಸಾಬೀತಾಗಿತ್ತು. ಜೈಲು ಶಿಕ್ಷೆಗೆ ಗುರಿಯಾಗಿದ್ದ ಶಶಿಕಲಾ ದಂಡವಾಗಿ 10 ಕೋಟಿ ರೂ. ಹಣವನ್ನು ಪಾವತಿಸಿದ್ದರು.

Comments

Leave a Reply

Your email address will not be published. Required fields are marked *